ಬೆಂಗಳೂರು : ಕರ್ನಾಟಕ ಸರ್ಕಾರ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಾರಂಭಿಸಿ ವಾರ್ಷಿಕ ಅನುದಾನ ನೀಡಿ ಕೊಂಕಣಿ ಭಾಷೆಯನ್ನು ಪ್ರೋತ್ಸಾಹಿಸಿರುವಂತೆ ಲಕ್ಷಾಂತರ ಕನ್ನಡಿಗರು ಇರುವ ಗೋವಾದಲ್ಲಿ ಗೋವಾ ಸರ್ಕಾರವು ಕನ್ನಡ ಭಾಷೆಯನ್ನು ಪ್ರೋತ್ಸಾಹಿಸಲು ಕನ್ನಡ ಸಾಹಿತ್ಯ ಅಕಾಡೆಮಿಯೊಂದನ್ನು ಸ್ಥಾಪಿಸುವಂತೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರವರು ಮನವಿ ಮಾಡಿದ್ದಾರೆ.
ಕರ್ನಾಟಕ ಗಡಿ ಪ್ರಾಧಿಕಾರ ಮತ್ತು ಗೋವಾ ಕನ್ನಡ ಮಹಾಸಂಘಗಳ ಆಶ್ರಯದಲ್ಲಿ ಗೋವಾದ ಕಲ್ಲಂಗೂಟ್ ನಲ್ಲಿ ಹಮ್ಮಿಕೊಂಡಿದ್ದ ಗಡಿ ರಾಜ್ಯದ ಗೋವಾದಲ್ಲಿ ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೊಂಕಣಿ ಭಾಷೆಗೆ ‘ಕುಮಾರವ್ಯಾಸರು ಹಾಡಿದರೆಂದರೆ ಕಲಿಯುಗ ದ್ವಾಪರವಾಗುವುದು’ ಕವಿರಾಜಮಾರ್ಗದ ಕರ್ತೃ ಅಮೋಘವಾಗಿ ಚಿತ್ರಿಸಿದ್ದಾರೆ. ಆದಿಕವಿ ಪಂಪ, ರನ್ನ, ಪೆಪೊನ್ನು ನ್ನರ ಹಳೆಗನ್ನಡ ಹರಿಹರ, ರಾಘವಾಂಕ, ಶರಣರ ನಡುಗನ್ನಡ ನಂತರ ಹೊಸಗನ್ನಡ ಹೀಗೆಯೇ ಭವ್ಯ ಸಾಹಿತ್ಯ ಪರಂಪರೆ ಬೆಳೆಯುತ್ತಲೇ ಇದೆ. ‘ಚಲುವನರಸುವ ಜಾಣ ಬಂದು ನೋಡು’ ಈ ಕನ್ನಡ ಅಕ್ಷರಗಳು ಬಳ್ಳಿಯನೇರಿರುವ ಹೂಕಾಯಿ ಹಣ್ಣುಗಳಂತೆ ಎಷ್ಟು ಸುಂದರ, ಕೇಶಿರಾಜನ ‘ಶಬ್ದಮಣಿದರ್ಪಣ’ಕ್ಕೆ ಸರಿಸಾಟಿ ಬೇರೆ ದರ್ಪಣವಿಲ್ಲ. ನವ್ಯ, ನವೋದಯ, ಬಂಡಾಯ ಹೀಗೆ ಹೊಸ ಹೊಸ ಪ್ರಯೋಗಗಳಾಗಿವೆ. ರೂಪಕ, ಉಪಮಾ, ಅಲಂಕಾರ ಸಾಮ್ರಾಜ್ಯ ಚಕ್ರವರ್ತಿಗಳು ಕನ್ನಡ ನೆಲದಲ್ಲಿ ರಾರಾಜಿಸಿದ್ದಾರೆ. ಭಾಷಾ ಭಂಡಾರ ಚಿನ್ನದ ರೇಖೆಯಲ್ಲಿ ಕುಂದಣವಿದ್ದಂತಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಹುಕ್ಕೇರಿ ಹಿರೇಮಠದ ಷ. ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಕನ್ನಡ ಭಾಷೆಯು ಪ್ರಾಚೀನತೆ ಹಾಗೂ ಶ್ರೀಮಂತ ಪರಂಪರೆಯನ್ನು ಹೊಂದಿರುವಂತಹದ್ದು. ದ್ರಾವಿಡ ಭಾಷೆಗಳಲ್ಲಿ ಮುಕುಟಪ್ರಾಯವಾಗಿರುವ ಕನ್ನಡವು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳ ಜೊತೆಗೆ ಶಾಸ್ತ್ರೀಯ ಸ್ಥಾನಮಾನ ಪಡೆದ ಮೃದು-ಮಧುರ ಭಾಷೆಯಾಗಿದೆ. ಪ್ರಾಚೀನ ಕವಿಗಳು, ರಸ ಋಷಿಗಳು ಹಾಗೂ ಕುವೆಂಪು, ಬೇಂದ್ರೆ, ಕಣವಿ, ಶಿವರುದ್ರಪ್ಪನವರಂತಹ ಆಧುನಿಕ ಕವಿ ಸಾಹಿತಿಗಳು ಕನ್ನಡವನ್ನು ಸಮೃದ್ಧಗೊಳಿಸಿದ್ದಾರೆ. ಆ ನಿಟ್ಟಿನಲ್ಲಿ ಗೋವಾದಲ್ಲಿ ಕನ್ನಡ ಕಟ್ಟುವ ಕೆಲಸವಾಗಲಿ ಎಂದರು.
ಕರ್ನಾಟಕ ಗಡಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಮಾತನಾಡಿ, ಗೋವಾ ಬೈನಾ ಬೀಚ್ ನಿರಾಶ್ರಿತರ ಶಾಶ್ವತ ಪರಿಹಾರ, ಕನ್ನಡ ಭವನಕ್ಕೆ 5 ಎಕರೆ ಜಮೀನು, ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡಿಗರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ, ಗೋವಾದಲ್ಲಿ ಕನ್ನಡ ಪಿ.ಯು ಕಾಲೇಜು ಪ್ರಾರಂಭಿಸಲು, ಗೋವಾ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ನಡೆದ ಮೆರವಣಿಗೆ ಗೋವಾ ರಾಮಕೃಷ್ಣ ಮಠದ ಮಹೇಶಾತ್ಮಾನಂದ ಸ್ವಾಮಿಜಿಗಳು ಚಾಲನೆ ನೀಡಿದರು ವಿವಿಧ ಕಲಾತಂಡಗಳು ಭಾಗವಹಿಸಿದ್ದವು.