ಬೆಂಗಳೂರು : ಪತಿಷ್ಠಿತ ಸುದ್ದಿಸಂಸ್ಥೆಯ ಪತ್ರಕರ್ತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ಮನದ ನೋವನ್ನ ಅಕ್ಷರಕ್ಕಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ 3 ಡೆತ್ನೋಟ್ ಪತ್ತೆಯಾಗಿದ್ದು, ಗಂಡನ ಕರಾಳ ಮುಖ ಅನಾವರಣಗೊಂಡಿದೆ.
ವೈಟ್ಫೀಲ್ಡ್ನ ನಲ್ಲೂರಹಳ್ಳಿ ರಸ್ತೆಯ ಮೈಪೇರ್ ಅಪಾರ್ಟ್ ಮೆಂಟ್ ನಿವಾಸಿ ಶ್ರುತಿ (35) ಮೃತ ಪತ್ರಕರ್ತೆ. 5 ದಿನಗಳ ಹಿಂದೆ ಫ್ಲ್ಯಾಟ್ನಲ್ಲಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಆಕೆಯ ಮನೆಗೆ ಮೃತಳ ಸೋದರ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಫ್ಲ್ಯಾಟ್ನಲ್ಲಿ 3 ಪತ್ರಗಳು ಪತ್ತೆಯಾಗಿವೆ. ತನ್ನ ಪಾಲಕರಿಗೆ, ಮತ್ತೊಂದು ತನ್ನ ಪತಿಗೆ ಹಾಗೂ 3ನೇಯದು ಸಾವಿಗೆ ಕಾರಣ ಏನೆಂದು ಬರೆದಿದ್ದಾರೆ.
ಶ್ರುತಿ ಸಾವಿಗೆ ಆಕೆಯ ಪತಿ ಅನೀಶ್ ಕೊಯಾಡನ್ ಕಾರಣ ಎಂದು ಮೃತಳ ಸಹೋದರ ನಿಶಾಂತ್ ನಾರಾಯಣ್ ದೂರು ನೀಡಿದ್ದಾರೆ. ನನ್ನ ತಂಗಿಯ ನಡೆತೆ ಬಗ್ಗೆ ಅನುಮಾನಗೊಂಡು ಅನೀಶ್, ಮನೆಯಲ್ಲಿ ಹಿಡನ್ ಕ್ಯಾಮರಾ ಇಟ್ಟು ನಿಗಾ ವಹಿಸಿದ್ದ. ಆಕೆಯ ಮಾತನ್ನು ರೆಕಾರ್ಡ್ ಮಾಡುತ್ತಿದ್ದ. ವಾರಾಂತ್ಯದಲ್ಲಿ ಪ್ರವಾಸದ ನೆಪದಲ್ಲಿ ಹೊರಗೆ ಕರೆದೊಯ್ದು ಕಿರುಕುಳ ಕೊಡುತ್ತಿದ್ದ. ಮದ್ಯಪಾನ ಮಾಡಿ ಮನೆಗೆ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ. ಜನವರಿ 15ರಂದು ಆಕೆಯ ಕೊಲೆಗೆ ಯತ್ನಿಸಿದ್ದ. ಆಕೆಯ ಚೀರಾಟ ಕೇಳಿ ಓಡಿಬಂದ ಭದ್ರತಾ ಸಿಬ್ಬಂದಿ ಪ್ರಾಣ ಉಳಿಸಿದ್ದರು ಎಂದು ನಿಶಾಂತ್ ದೂರಿನಲ್ಲಿ ವಿವರಿಸಿದ್ದು, ವೈಟ್ಫೀಲ್ಡ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.
ಅತ್ತ ಸಾವಿಗೂ ಮುನ್ನ ಶ್ರುತಿ ಬರೆದ ಪತ್ರದಲ್ಲೂ ಗಂಡನ ಕಿರುಕುಳದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ‘ನನ್ನ ಸಾವಿಗೆ ನಾನೇ ಕಾರಣ. ನನ್ನ ಸಾವಿನಿಂದ ಹೆಚ್ಚು ಕೊರಗಬೇಡಿ. ಆದಷ್ಟು ಬೇಗ ನೋವಿನಿಂದ ಹೊರಬಂದು ನೆಮ್ಮದಿಯಿಂದ ಜೀವನ ಸಾಗಿಸಿ’ ಎಂದು ಪಾಲಕರಿಗೆ ಶ್ರುತಿ ಮನವಿ ಮಾಡಿದ್ದಾರೆ. ಮತ್ತೊಂದು ಪತ್ರದಲ್ಲಿ ‘ಮದುವೆಯಾದ ದಿನದಿಂದ ನನಗೆ ಹಿಂಸೆ ಕೊಟ್ಟಿದ್ದೀಯಾ. ನಾನು ಸಾವನ್ನಪ್ಪಿದ ಬಳಿಕ ನೀನು ಬೇರೊಂದು ವಿವಾಹವಾಗಿ ಆಕೆಗೂ ನನಗೆ ಕಾಟ ಕೊಟ್ಟಂತೆ ಕೊಡಬೇಡ’ ಎಂದು ಪತಿಗೆ ಶ್ರುತಿ ಹೇಳಿದ್ದಾರೆ ಎನ್ನಲಾಗಿದೆ.
ರಾಯಿಟರ್ಸ್ ಸುದ್ದಿಸಂಸ್ಥೆಯ ಪತ್ರಕರ್ತೆಯಾಗಿದ್ದ ಕೇರಳ ಮೂಲದ ಶ್ರುತಿಯನ್ನು ಖಾಸಗಿ ಕಂಪನಿ ಉದ್ಯೋಗಿ ಅನೀಶ್ 2017ರಲ್ಲಿ ವಿವಾಹವಾಗಿದ್ದ. ಮದುವೆ ಬಳಿಕ ದಂಪತಿ ಬೆಂಗಳೂರಿನ ವೈಟ್ಫೀಲ್ಡ್ ಸಮೀಪದ ಅಪಾರ್ಟ್ವೆುಂಟ್ನಲ್ಲಿ ನೆಲೆಸಿದ್ದರು. ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಮಾ.19ರಂದು ಜಗಳವಾಗಿದೆ. ಕೋಪಗೊಂಡ ಅನೀಶ್, ಕೇರಳಕ್ಕೆ ತೆರಳಿದ್ದಾನೆ. ಬಳಿಕ ಶ್ರುತಿ ಸಾವಿನ ಮನೆಯ ಕದತಟ್ಟಿದ್ದಾರೆ. ಪತ್ನಿಯ ಸಾವಿನ ಸುದ್ದಿ ಕೇಳಿ ಅನೀಶ್ ನಾಪತ್ತೆಯಾಗಿದ್ದಾನೆ.