ಸುತ್ತಲಿನ ಜನ -ಪರಿಸರದ ವಿದ್ಯಮಾನಗಳ ಕುರಿತು ಮಾತನಾಡುವುದಕ್ಕಿಂತ ನಮ್ಮೊಳಗಿನ ‘ ನಾನು’ ಜೊತೆ ಮಾತನಾಡುವ ಅಗತ್ಯವಿದೆ ಎಂದು ‘ಪ್ರಜಾವಾಣಿ’ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅಭಿಪ್ರಾಯಪಟ್ಟರು.
ಬೆನಕ ಬುಕ್ಸ್ ಬ್ಯಾಂಕ್ ಯಳಗಲ್ಲು (ಕೋಡೂರು) ಹಾಗೂ ಬೆಂಗಳೂರಿನ ‘ಪ್ರಾಫಿಟ್ ಪ್ಲಸ್’ ಮಾಸಪತ್ರಿಕೆಯ ಸಹಯೋಗದಲ್ಲಿ ನಗರದ ಶಿವಾನಂದ ವೃತ್ತ ಬಳಿಯ ಗಾಂಧಿಭವನದಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ಸಮಾರಂಭದಲ್ಲಿ ಸುಧಾ ಶರ್ಮಾ ಚವತ್ತಿ ಅವರು ‘ನಮ್ಮೊಳಗೆ ನಾವು’, ಮಾಲತಿ ಭಟ್ ಅವರ ‘ದೀಪದ ಮಲ್ಲಿಯರು’ ಶೋಭಾ ಹೆಗಡೆ ಅವರ ‘ಅವಲೆಂಭ ಸುಗಂಧ’ ಹಾಗೂ ಸಿ. ಚಿತ್ರ ಅವರ ‘ಅನಾಮಿಕಳ ಅಂತರಂಗ’ -ಈ ನಾಲ್ಕೂ ಕೃತಿಗಳನ್ನು ಲೋಕಾರ್ಪಣೆ ಗೊಳಿಸಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
‘ನಮ್ಮೊಳಗಿನ ನಾನು’ ದರ್ಶನ ಮಾಡುವುದು ಎಂದರೆ ಅಧ್ಯಾತ್ಮಕ ಮೂಲಕ ನೋಡಬೇಕಿಲ್ಲ. ನಮ್ಮ ನಡೆ-ನುಡಿಯನ್ನು ಅವಲೋಕಿಸಬೇಕು. ಅದಕ್ಕಾಗಿ ಸಮಯ ಹೊಂದಿಸಿಕೊಳ್ಳುವ ಅನಿವಾರ್ಯತೆ ಇದೆ. ಇದರಿಂದ ಮನೋನೆಮ್ಮದಿಯೂ ಸಾಧ್ಯವಾಗುತ್ತದೆ ಎಂದರು.
ಕೂಡು ಕುಟುಂಬದ ಮಹತ್ವ: ಈ ಹಿಂದೆ ಕೂಡು ಕುಟುಂಬಗಳಿದ್ದವು. ಅತ್ಯಂತ ಸಹನೆ, ಸಹಕಾರ, ಸಹಬಾಳ್ವೆಯನ್ನು ಕಲಿಸುತ್ತಿದ್ದವು. ವ್ಯಕ್ತಿಯ ಕೋಪ-ತಾಪ-ಅವಸರಗಳನ್ನು ನಿಯಂತ್ರಿಸುತ್ತಿದ್ದವು. ಹೀಗಾಗಿ, ಈ ವ್ಯವಸ್ಥೆಯು ಮಹತ್ವ ಪಡೆದುಕೊಂಡಿತ್ತು. ಆದರೆ, ಇಂದು ಇಂತಹ ಪಾಠವನ್ನು ಯಾರೂ ಹೇಳುವ ಸ್ಥಿತಿಯಲ್ಲಿ ನಮ್ಮ ಬದುಕಿಲ್ಲ. ಆದ್ದರಿಂದ, ನಮ್ಮ ಸುತ್ತಮುತ್ತಲಿನ ವಿದ್ಯಮಾನಗಳನ್ನು ಸೂಕ್ಷ್ಮ ಮನಸ್ಸಿನಿಂದ ನೋಡಿ, ತಿಳಿಯುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಇದಗ ಲೋಕಾರ್ಪಣೆಯಾದ ಎಲ್ಲ ನಾಲ್ಕೂ ಪುಸ್ತಕಗಳು ಸೂಕ್ಷ್ಮ ಮನಸ್ಸನ್ನು ಅನಾವರಣಗೊಳಿಸುತ್ತವೆ ಎಂದು ಪ್ರಶಂಸಿಸಿದರು.
ಆಪ್ತ ಸಮಾಲೋಚಕಿ-ಲೇಖಕಿ ಡಾ. ಶಾಂತಾ ನಾಗರಾಜ್ ಮಾತನಾಡಿ ಇಂದಿನ ಬರಹಗಾರರು ಒತ್ತಡದ ಬದುಕನ್ನು ಎದುರಿಸಿ, ಪರಿಣಾಮಕಾರಿಯಾಗಿ ಬರೆಯುತ್ತಿದ್ದಾರೆ ಎಂದು ಪ್ರಶಂಸಿಸಿದರೆ, ಲೇಖಕಿ ಭುವನೇಶ್ವರಿ ಹೆಗಡೆ ಮಾತನಾಡಿ ‘ ಸ್ತ್ರೀವಾದವನ್ನು ಕೇಂದ್ರೀಕರಿಸಿ ಮಾನವೀಯತೆಯನ್ನು ವಿಜೃಂಭಿಸುವ ಬರಹಗಳನ್ನು ಇದೀಗ ಲೋಕಾರ್ಪಣೆಯಾದ ನಾಲ್ಕು ಪುಸ್ತಕಗಳಲ್ಲಿ ಕಾಣಬಹುದು ಎಂದು ಹೇಳಿದರು.
ಬಿಡುಗಡೆಯಾದ ನಾಲ್ಕು ಕೃತಿಗಳ ಲೇಖಕಿಯರಾದ ಸುಧಾ ಶರ್ಮಾ ಚವತ್ತಿ, ಶೋಭಾ ಹೆಗಡೆ, ಸಿ. ಚಿತ್ರಾ ಹಾಗೂ ಮಾಲತಿ ಭಟ್ ಮಾತನಾಡಿ, ತಮ್ಮ ಬರಹಗಳ ಹಿಂದಿನ ಅನುಭವಗಳನ್ನು ಹಂಚಿಕೊಂಡರು.
ವೈದ್ಯ ಲೇಖಕಿ ಡಾ. ವಸುಂಧರಾ ಭೂಪತಿ ಅಧ್ಯಕ್ಷತೆ ವಹಿಸಿ, ಮನುಷ್ಯ ಸಂಬಂಧಗಳು ಕದಡುತ್ತಿವೆ. ಇಂತಹ ಕಾಲಘಟ್ಟದ್ದಿರುವ ನಮಗೆ ಪಂಪ ಮಹಾಕವಿಯ ‘ತಾನೊಂದೇ ಮನುಜ ಕುಲಂ’ ಎನ್ನುವ ಮಾತು ಬದುಕಿನ ಮಾರ್ಗವಾಗಬೇಕು. ಬದುಕಿನ ಪ್ರೀತಿ ಹೆಚ್ಚಿಸುವ ರೀತಿಯಲ್ಲಿ ಇದೀಗ ಲೋಕಾರ್ಪಣೆಯಾದ ನಾಲ್ಕೂ ಕೃತಿಗಳು ಇವೆ ಎಂದು ಅಭಿಪ್ರಾಯಪಟ್ಟರು.
ಅವಧಿ ಡಿಜಿಟಲ್ ಸಂಸ್ಥೆಯ ಜಿ.ಎನ್. ಮೋಹನ್, ನಿವೃತ್ತ ಪತ್ರಿಕಾ ಸಂಪಾದಕ ತಿಮ್ಮಪ್ಪ ಭಟ್, ಪತ್ರಕರ್ತೆ ಶಾಂತಲಾ, ಯಶೋದಾ ನಾಗರಾಜ್, ಉಮಾದೇವಿ, ಮಂಜುನಾಥ ಚಾಂದ್ , ಹನುಮೇಶ ಯಾವಗಲ್, ಕೃಷಿ ವಿಜ್ಞಾನಿ ಮಂಜುನಾಥ, ಹಿರಿಯ ಪತ್ರಕರ್ತ ನರಸಿಂಹ ಜೋಶಿ, ಪ್ರಕಾಶಕ ಗಣೇಶ ಇತರೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಶಾರ್ವರಿ ಹೆಗಡೆ ಪ್ರಾರ್ಥಿಸಿದರು. ಸುಧಾ ಶರ್ಮ ಚವತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ, ತಮ್ಮ ಪ್ರಾಫಿಟ್ ಪ್ಲಸ್ ಮಾಸಿಕ ಪತ್ರಿಕೆಯ ಕಾರ್ಯ ನಿರ್ವಹಣೆ ಕುರಿತು ಮಾತನಾಡಿದರು. ಇಂದಿರಾ ಶರಣ್ ಜಮ್ಮಲದಿನ್ನಿನಿರೂಪಿಸಿದರು.