ಬೆಂಗಳೂರು: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ದೈಹಿಕ ಸಾಮರ್ಥ್ಯಕ್ಕೆ ಕ್ರೀಡೆ ಅಲ್ಲದೆ ಕಲೆ, ಸಾಂಸ್ಕೃತಿಕ ಹಾಗೂ ಪರಿಸರ ಕಾಳಜಿ ಅತ್ಯಗತ್ಯ ಎಂದು ಭಾರತದ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ತಿಳಿಸಿದರು.
ಬೆಂಗಳೂರಿನ ಸರ್ಜಾಪುರದಲ್ಲಿರುವ ಗ್ರೀನ್ ವುಡ್ ಹೈ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕಲೆ, ಸಂಗೀತ ಭವನ ಹಾಗೂ ಅತ್ಯಾಧುನಿಕ ಒಳಾಂಗಣ ಕ್ರೀಂಡಾಗಣವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣವು ಜ್ಞಾನದ ಅಡಿಪಾಯವಾಗಿದ್ದು, ಈ ಶಾಲೆಯು ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ವಿದ್ಯಾರ್ಥಿಗಳಿಗೆ ಕಲೆ, ನಾಟಕ, ಸಂಗೀತ ಸಮುಚ್ಚಯದ ಜೊತೆಗೆ ಅತ್ಯಾಧುನಿಕ ಕ್ರೀಡಾಂಗಣ ಒದಗಿಸಿಕೊಟ್ಟಿರುವುದು ಸಂತೋಷದಾಯಕವಾಗಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದ್ದು, ರಾಜ್ಯವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದ ಉಪರಾಷ್ಟ್ರಪತಿ, ಪ್ರತಿಯೊಬ್ಬರು ಮಾತೃ ಭಾಷೆಯನ್ನು ಮರೆಯಬಾರದು. ಮೊದಲು ತಾಯಿಗೆ, ನಂತರ ಜನ್ಮ ಭೂಮಿಗೆ ಗೌರವ ನೀಡಬೇಕು ಎಂದರು.
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಮಾತನಾಡಿ, ಗುಣಮಟ್ಟ, ತಾಂತ್ರಿಕ, ಉದ್ಯೋಗ ಅಧಾರಿತ ಶಿಕ್ಷಣವನ್ನು ಒದಗಿಸುವಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು ಒಂದಾಗಿದೆ. ಮಕ್ಕಳು ಮತ್ತು ಯುವಜನರ ಭವಿಷ್ಯಕ್ಕೆ ಸರಿಯಾದ ಮಾರ್ಗದರ್ಶನ ನೀಡಲು ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಅವಶ್ಯಕವಾಗಿದೆ ಎಂದರು.
ಐಐಟಿ, ಐಐಎಂ ನಂತಹ ದೇಶದ ದೊಡ್ಡ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳೊಂದಿಗೆ ಸಂಬಂಧ ಹೊಂದಿರುವ ಯುವಕರ ಸಂಶೋಧನೆಯಿಂದ ಇಂದು ದೇಶವು ವೇಗವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತಾ ಸಾಗುತ್ತಿದೆ. ಇಂದು ಭಾರತೀಯ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿ ತಮ್ಮ ಪ್ರತಿಭೆಯಿಂದ ವಿಶ್ವದ ಜನರನ್ನು ಅಚ್ಚರಿಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.
ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿ, ದೇಶದ ಭವಿಷ್ಯ ಹಾಗೂ ಅಭಿವೃದ್ಧಿಗೆ ಪ್ರಮುಖರಾಗಬೇಕು. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಕಲೆ, ನಾಟಕ, ಸಂಗೀತ ಶಿಕ್ಷಣಕ್ಕೂ ಗಮನ ನೀಡಲಾಗಿದ್ದು, ವಿದ್ಯಾರ್ಥಿಗಳನ್ನು ಈ ವಿಭಾಗಗಳಲ್ಲಿ ಪರಿಣಿತರನ್ನಾಗಿಸಲು ಅವರ ಕನಸೆಲ್ಲ್ಲಾ ನನಸಾಗುವಂತೆ ಆಧುನಿಕ ಸೌಲಭ್ಯಗಳಿರುವ ಅದ್ಭುತ ಕಟ್ಟಡವನ್ನು ಅನಾವರಣಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್, ಗ್ರೀನ್ ವುಡ್ ಹೈ ಇಂಟರ್ನ್ಯಾಷನಲ್ ಶಾಲೆಯ ಅಧ್ಯಕ್ಷ ವಿಜಯ್ ಅಗರ್ವಾಲ್ ಸೇರಿದಂತೆ ಗಣ್ಯರು, ವಿದ್ಯಾರ್ಥಿಗಳು ಇದ್ದರು.