ಬೆಂಗಳೂರು (ಜ. 15) : ರಾಜ್ಯದಲ್ಲಿ ಸತತ ಎರಡನೇ ವಾರವೂ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಸೋಮವಾರ ಬೆಳಿಗ್ಗೆ 5 ಗಂಟೆವರೆಗೂ ತುರ್ತು ಸಂದರ್ಭ ಹೊರತುಪಡಿಸಿ ಇತರೆ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧವಿರಲಿದೆ. ಆದರೆ ವಿಕೇಂಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಜನರು ರಸ್ತೆಗಿಳಿದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.
ಕರ್ಫ್ಯೂ ಬೆನ್ನಲ್ಲೇ ಬೆಂಗಳೂರಿನ ಬಹುತೇಕ ಕಡೆ ಅನಾವಶ್ಯಕವಾಗಿ ರಸ್ತೆಗಿಳಿಯುವವರನ್ನು ಪೋಲಿಸರು ವಿಚಾರಿಸುತ್ತಿದ್ದಾರೆ. ಹೀಗೆ ವಿಚಾರಣೆ ವೇಳೆ ಝೋಮ್ಯಾಟೋ ಹೆಸರಲ್ಲಿ ಸುಳ್ಳು ಹೇಳಿ ರಸ್ತೆಗಿಳಿದಿದ್ದ ಯುವಕನೊಬ್ಬನ ಬೈಕನ್ನು ಪೋಲಿಸರು ಸೀಝ್ ಮಾಡಿದ್ದಾರೆ.
ಸ್ಯಾಟಲೈಟ್ ಬಸ್ ಸ್ಟಾಪ್ ಚೆಕ್ ಪೋಸ್ಟ್ನಲ್ಲಿ ಝೋಮ್ಯಾಟೋ ಬ್ಯಾಗ್ ಜತೆಗೆ ಬೈಕ್ ಮೇಲೆ ಬಂದಿದ್ದ ಯುವಕನನ್ನು ಪೋಲಿಸರು ತಡೆದು ವಿಚಾರಿಸಿದ್ದಾರೆ. “ಎಲ್ಲಿಗಪ್ಪಾ ಹೋಗ್ತಾ ಇದೀಯಾ” ಎಂದು ಪೋಲಿಸರು ಯುವಕನಿಗೆ ಕೇಳಿದ್ದಾರೆ. ಈ ವೇಳೆ ಯುವಕ “ಸರ್ ಝೋಮ್ಯಾಟೋ ಬುಕಿಂಗ್ ಇದೆ ಸರ್ ಊಟ ತೆಗೆದುಕೊಂಡು ಹೋಗ್ತಾ ಇದೀನಿ” ಎಂದು ಉತ್ತರಿಸಿದ್ದಾನೆ. ಆದರೆ ಬ್ಯಾಗ್ನಲ್ಲಿರುವ ಆಹಾರ ಪೊಟ್ಟಣ ತೋರಿಸು ಎಂದಾಗ ಝೋಮ್ಯಾಟೋ ಬಾಯ್ ಅಸಲಿ ಮುಖ ಅನಾವರಣಗೊಂಡಿದೆ.
ಝೋಮ್ಯಾಟೋ ಡೆಲಿವರಿ ಬಾಯ್ ಹೆಸರಿನಲ್ಲಿ ಸುಳ್ಳುಹೇಳಿ ಯುವಕ ಸಿಕ್ಕಿಬಿದ್ದಿದ್ದಾನೆ. ಯುವಕನ ಬಳಿ ಇದ್ದ ಬ್ಯಾಗ ಪರೀಶಿಲಿಸಿದಾಗ ಊಟದ ಬದಲು ಝೋಮ್ಯಾಟೋ ಬ್ಯಾಗ್ ಬಲೂನ್, ಲೈಟಿಂಗ್ಸ್ ಇರುವುದು ಪತ್ತೆಯಾಗಿದೆ. ಕೊರೋನಾ ಪ್ರಕರಣಗಳ ಸಂಖ್ಯೆ ಬೆಂಗಳೂರಿನಲ್ಲಿ ಗಣನೀಯವಾಗಿ ಏರುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಸೋಂಕಿಗೆ ಕಡಿವಾಣ ಹಾಕುವುದು ಅವಶ್ಯವಾಗಿದೆ. ಆದರೆ ವೀಕೆಂಡ್ ಕರ್ಫ್ಯೂ ಮಧ್ಯೆ ಝೋಮ್ಯಾಟೊ ಬ್ಯಾಗ್ ತೋರಿಸಿ ಎಸ್ಕೇಪ್ ಆಗಲು ಯುವಕ ಯತ್ನಸಿದ್ದಾನೆ. ಯಾಕಪ್ಪಾ ಸುಳ್ಳು ಹೇಳ್ತಾ ಇದೀಯಾ ಎಂಬ ಪೋಲಿಸರ ಪ್ರಶ್ನೆಗೆ ಯುವಕ ಗಪ್ಚುಪ್ ಆಗಿದ್ದಾನೆ. ಕೊನೆಗೆ ಯುವಕನ ಬೈಕ್ ಪೋಲಿಸರು ಸೀಝ್ ಮಾಡಿದ್ದು ಕೇಸ್ ಹಾಕಿದ್ದಾರೆ.
ತಿಂಗಳಾಂತ್ಯದವರೆಗೂ ನಿತ್ಯ ಕರ್ಫ್ಯೂ
ಕೊರೋನಾ ಸೋಂಕು ಹತೋಟಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ತಿಂಗಳಾಂತ್ಯದವರೆಗೂ ನಿತ್ಯ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದಲ್ಲಿ ದಿನಪೂರ್ತಿ (ಸತತ 55 ಗಂಟೆ) ಕರ್ಫ್ಯೂ ಜಾರಿಗೊಳಿಸುತ್ತಿದೆ. ಈಗಾಗಲೇ ಕಳೆದ ಒಂಬತ್ತು ದಿನಗಳಿಂದ (ಜ.6) ರಾತ್ರಿ ಕಫ್ರ್ಯೂ ಮತ್ತು ಕಳೆದ ವಾರಾಂತ್ಯದಲ್ಲಿ ಕರ್ಫ್ಯೂವಿತ್ತು.
ಕಳೆದ ವಾರ ಮೊದಲ ವಾರಾಂತ್ಯದ ಕಫ್ರ್ಯೂ ಹಿನ್ನೆಲೆ ಪೊಲೀಸರು ಒಂದಿಷ್ಟು ವಿನಾಯ್ತಿಗಳನ್ನು ನೀಡಿದ್ದರು. ಆದರೆ, ಈ ವಾರ ಕೊರೋನಾ ಸೋಂಕು ಹೊಸ ಪ್ರಕರಣಗಳು 30 ಸಾವಿರ ಆಸುಪಾಸಿಗೆ ಹೆಚ್ಚಳವಾಗಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಹೀಗಾಗಿ, ಮತ್ತಷ್ಟುಬಿಗಿ ನಿಯಮ ಜಾರಿಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ.
ಕಳೆದ ವಾರ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಅನಗತ್ಯವಾಗಿ ಓಡಾಟ ನಡೆಸುವವರ ವಿರುದ್ಧ ಕಾನೂನು ಕ್ರಮ, ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಬಾರಿ ಮತ್ತಷ್ಟುಬಿಗಿ ಕ್ರಮದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದಲೇ ವಾಹನ ತಪಾಸಣೆ ಆರಂಭಗೊಂಡಿದೆ. ಪಾರ್ಸಲ್ ನಿಯಮ ಪಾಲಿಸದ ಹೋಟೆಲ್, ರೆಸ್ಟೋರೆಂಟ್ಗಳಿಗೆ ದಂಡ, ಪರವಾನಗಿ ರದ್ದುಮಾಡುವ ಎಚ್ಚರಿಕೆಯನ್ನು ಜಿಲ್ಲಾಡಳಿತಗಳು ನೀಡಿವೆ. ಇನ್ನು ಈ ತಿಂಗಳ ಅಂತ್ಯದವರೆಗೂ ರಾತ್ರಿ ಕಫ್ರ್ಯೂ, ವಾರಾಂತ್ಯದ ಕಫ್ರ್ಯೂ ಮುಂದುವರೆಯಲಿವೆ.