ಬೆಂಗಳೂರು(ಡಿ. 21): ರಾತ್ರಿ ಮನೆಗೆ ತಡವಾಗಿ ಬಂದ ಕಾರಣ ಅಣ್ಣ ಬೈದಿದ್ದಕ್ಕೆ ಬೇಸರಗೊಂಡ ತಮ್ಮ, ಪಿಸ್ತೂಲ್ನಿಂದ ಗುಂಡು ಹಾರಿಸಿಕೊಳ್ಳಲು ಹೋದಾಗ ಆತನ ರಕ್ಷಣೆಗೆ ಧಾವಿಸಿದ ಗೆಳೆಯ ಆಕಸ್ಮಿಕವಾಗಿ ಗಾಯಗೊಂಡ ಘಟನೆ ನಗರದ ಸದ್ದುಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗುರಪ್ಪನಪಾಳ್ಯದ ಫೈರೋಜ್ ಗಾಯಗೊಂಡವರು. ಫೈರೋಜ್ ತನ್ನ ಗೆಳೆಯನಾದ ಸಲ್ಮಾನ್ ಗುಂಡು ಹಾರಿಸಿಕೊಳ್ಳದಂತೆ ತಡೆಯಲು ಯತ್ನಿಸಿದಾಗ ಆಕಸ್ಮಿಕವಾಗಿ ಗಾಯಗೊಂಡಿದ್ದಾನೆ.
ರಿಯಲ್ ಎಸ್ಟೇಟ್ ಉದ್ಯಮಿ ಸನಾವುಲ್ಲಾ ಖಾನ್ ಅವರು, ತಮ್ಮ ಕುಟುಂಬದ ಜತೆ ಗುರುಪ್ಪನಪಾಳ್ಯದಲ್ಲಿ ನೆಲೆಸಿದ್ದಾರೆ. ಅವರ ಸೋದರ ಸಲ್ಮಾನ್ ಮನೆಯಲ್ಲಿ ಹೇಳದೆ ಸ್ನೇಹಿತರ ಜತೆ ಸುತ್ತಾಟಕ್ಕೆ ಹೋಗಿ ನಿತ್ಯ ಮನೆಗೆ ರಾತ್ರಿ ತಡವಾಗಿ ಬರುತ್ತಿದ್ದ. ಈ ವರ್ತನೆಗೆ ಆಕ್ಷೇಪಿಸಿದ್ದ ಸನಾವುಲ್ಲಾ, ಇದೇ ವಿಚಾರವಾಗಿ ಹಲವು ಬಾರಿ ಸೋದರನಿಗೆ ಬುದ್ಧಿ ಮಾತು ಹೇಳಿದ್ದರೂ ಪ್ರಯೋಜನವಾಗಿರಲಿಲ್ಲ. ಎಂದಿನಂತೆ ಭಾನುವಾರ ರಾತ್ರಿ ಹೊರ ಹೋಗಿದ್ದ ಸಲ್ಮಾನ್ ರಾತ್ರಿ 9.30ರ ಸುಮಾರಿಗೆ ಸ್ನೇಹಿತ ಫೈರೋಜ್ ಜತೆ ಮನೆಗೆ ಬಂದಿದ್ದಾನೆ. ಆಗ ಸೋದರನಿಗೆ ಸನಾವುಲ್ಲ ಬೈದಿದ್ದಾರೆ.
ಇದರಿಂದ ಕೆರಳಿದ ಸಲ್ಮಾನ್, ‘ನನಗೆ ಯಾವಾಗಲೂ ನೀನು ಬೈಯುತ್ತಿಯಾ. ನಾನು ಬದುಕುವುದೇ ಇಲ್ಲ’ ಎಂದು ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಗ ಜತೆಗಿದ್ದ ಗೆಳೆಯ ಫೈರೋಜ್ ಆತನನ್ನು ರಕ್ಷಿಸಲು ಪಿಸ್ತೂಲ್ ಕಸಿದುಕೊಳ್ಳಲು ಮುಂದಾಗಿದ್ದು, ಆಗ ನಡೆದ ಎಳೆದಾಟದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಫೈರೋಜ್ ಬಲೈಗೆ ಬಿದ್ದಿದೆ. ಕೂಡಲೇ ಗಾಯಾಳುವನ್ನು ಸನಾವುಲ್ಲಾ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಗಾಯಾಳು ಸುರಕ್ಷಿತವಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮ ಹೊಂದಿರುವ ಕಾರಣಕ್ಕೆ ಸನಾವುಲ್ಲಾ ಅವರು, ಪರವಾನಿಗೆ ಪಡೆದು ಪಿಸ್ತೂಲ್ ಬಳಸುತ್ತಿದ್ದರು. ಈ ಸಂಬಂಧ ಸದ್ದುಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.