ಬೆಂಗಳೂರು : ರಾಜ್ಯದಲ್ಲಿ ಹಿಜಾಬ್ ವಿವಾದ ಈಗ ದೊಡ್ಡ ಮಟ್ಟದಲ್ಲಿ ಅವಾಂತರ ಸೃಷ್ಟಿಸುತ್ತಿದೆ. ಈ ಗದ್ದಲ ಈಗ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೇ, ಇದು ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಶಾಲಾ – ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತದ ವಸ್ತುಗಳನ್ನು ಧರಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಅಲ್ಲದೆ ಹಿಜಾಬ್ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಹೈಕೋರ್ಟ್ ಸಹ ಹಿಜಾಬ್ ವಿವಾದದ ಕುರಿತು ವಿಚಾರಣೆ ನಡೆಸುತ್ತಿದೆ. ಆದರೆ, ಈ ವಿವಾದ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಹೀಗಾಗಿ ಎಲ್ಲರೂ ಹೈಕೋರ್ಟ್ ತೀರ್ಪಿನ ಮೇಲೆ ಕಣ್ಣಿಟ್ಟಿದ್ದಾರೆ.
ಕೇಸರಿ ಶಾಲು ಹಾಗೂ ಹಿಜಾಬ್ ವಿವಾದ ತಾರ್ಕಿಕ ಅಂತ್ಯ ಪಡೆಯುವ ಮೊದಲೇ ರಾಜ್ಯದ ಕೆಲವು ಅನುದಾನಿತ ಖಾಸಗಿ ಶಾಲೆಗಳು ಪೋಷಕರಿಗೆ ವಸ್ತ್ರಸಂಹಿತೆ ಜಾರಿ ಮಾಡಿವೆ. ಇದು ಸಾಕಷ್ಟು ಚರ್ಚೆಗೆ ಕಾರಣವಗುತ್ತಿದೆ.
ಮಕ್ಕಳನ್ನು ಶಾಲೆಗೆ ಬಿಡುವಾಗ ಹಾಗೂ ಮರಳಿ ಕರೆದುಕೊಂಡು ಹೋಗುವಾಗ ಮನೆಯಲ್ಲಿಯೇ ಇರುವ ಉಡುಪುಗಳನ್ನು ಧರಿಸಿ ಬರುತ್ತಾರೆ. ಈ ನಿಟ್ಟಿನಲ್ಲಿ ಖಾಸಗಿ ಶಾಲೆಗಳು ಪೋಷಕರು ತಮ್ಮ ಮಕ್ಕಳನ್ನು ನೋಡಲು ಶಾಲೆಗಳಿಗೆ ಬಂದಾಗ ಅನೌಪಚಾರಿಕ ಉಡುಪುಗಳಲ್ಲಿ ಬರುವುದನ್ನ ತಪ್ಪಿಸಬೇಕು ಎನ್ನುವ ಕಾರಣಕ್ಕೆ ಡ್ರೆಸ್ ಕೋಡ್ ಜಾರಿ ಮಾಡಿದೆ.
ಸದ್ಯದ ಮಾಹಿತಿಯಂತೆ, ಪೋಷಕರು ಅಥವಾ ಪಾಲಕರು ಬರ್ಮುಡಾ, ಶಾರ್ಟ್ಸ್, ಸ್ಪೋರ್ಟ್ಸ್ ವೇರ್, ಹೌಸ್ ವೇರ್, ಸ್ಲೀವ್ಲೆಸ್ ಮತ್ತು ಟ್ರ್ಯಾಕ್ ಪ್ಯಾಂಟ್ ಇತ್ಯಾದಿಗಳನ್ನು ಧರಿಸುವುದನ್ನು ನಿರ್ಬಂಧಿಸಲಾಗಿದೆ. ಅಲ್ಲದೇ, ಈ ಕುರಿತು ಹಲವು ಶಾಲೆಗಳು ಸುತ್ತೋಲೆ ಹೊರಡಿಸಿವೆ.