ಬೆಂಗಳೂರು: ಕ್ರಾನಿಕ್ ಬಡ್-ಚಿಯಾರಿ ಸಿಂಡ್ರೋಮ್ನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ನಗರದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಡೈರೆಕ್ಟ್ ಇಂಟ್ರಾಹೆಪಾಟಿಕ್ ಪೋರ್ಟೋಕಾವಲ್ ಷಂಟ್ (DIPS) ವಿಧಾನವನ್ನು ಬಳಸಿಕೊಂಡು ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಚಿಕಿತ್ಸಾ ವಿಧಾನವು ಈ ರೀತಿಯ ಕಾಯಿಲೆಗಳಿಗೆ ಬಳಸುವ ಅತ್ಯಾಧುನಿಕ ಮತ್ತು ಸುಧಾರಿತ ಚಿಕಿತ್ಸಾ ವಿಧಾನವಾಗಿದ್ದು ಎಲ್ಲರ ಗಮನಸೆಳೆಯುವ ಚಿಕಿತ್ಸೆಯನ್ನು ವೈದ್ಯರಾದ ತಜ್ಞ ವೈದ್ಯರಾದ ಡಾ.ಸತೀಶ್ ರಾವ್, ಡಾ.ಶೈಲೇಶ್ ಪೇಣೆ ಹೃದ್ರೋಗ ತಜ್ಞರು ಹಾಗೂ ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಡಾ.ಎಂ.ಎನ್.ರವಿ ನೀಡಿದ್ದಾರೆ.
ಇನ್ನು ಬಡ್ ಚಿಯಾರಿ ಸಿಂಡ್ರೋಮ್ ಎನ್ನುವುದು ಯಕೃತ್ತಿನ ರಕ್ತನಾಳಗಳು ಹೆಪ್ಪುಗಟ್ಟುವಿಕೆ ಅಥವಾ ಉರಿಯೂತದಿಂದ ನಿರ್ಬಂಧಿಸಲ್ಪಟ್ಟಿರುವ ಅಥವಾ ಕಿರಿದಾಗುವ ಸ್ಥಿತಿಯಾಗಿದೆ. ಇದು ಮೈಲೋಪ್ರೊಲಿಫೆರೇಟಿವ್ ಕಾಯಿಲೆ, ಸಿಕಲ್ ಸೆಲ್ ಕಾಯಿಲೆ, ಕಿಬ್ಬೊಟ್ಟೆಯ ಸೋಂಕು ಮತ್ತು ಕೆಲವೊಮ್ಮೆ ಗರ್ಭಾವಸ್ಥೆಯಿಂದ ಉಂಟಾಗುತ್ತದೆ. ಭಾರತದಲ್ಲಿ ಯಕೃತ್ತಿನ ರಕ್ತನಾಳಗಳು ಮಾತ್ರವಲ್ಲದೆ ಕೆಳಮಟ್ಟದ ವೆನಾ ಕ್ಯಾವಾ ಕೂಡ ಬಡ್-ಚಿಯಾರಿ ಸಿಂಡ್ರೋಮ್ನಲ್ಲಿ ನಿರ್ಬಂಧಿಸಲ್ಪಡುತ್ತವೆ. ಹೊಟ್ಟೆಯ ಮೇಲ್ಭಾಗದಲ್ಲಿ ನೋವು, ಕಾಮಾಲೆ, ಅನ್ನನಾಳದಲ್ಲಿ ರಕ್ತಸ್ರಾವ, ಹಿಗ್ಗಿದ ಮತ್ತು ಕೋಮಲ ಯಕೃತ್ತು, ಹೆಪಾಟಿಕ್ ಎನ್ಸೆಫಲೋಪತಿ, ವಾಂತಿ ಮತ್ತು ಹೊಟ್ಟೆಯಲ್ಲಿ ದ್ರವದ ಶೇಖರಣೆ ಈ ರೋಗದ ಲಕ್ಷಣಗಳಾಗಿವೆ. ಇದಕ್ಕೆ ಚಿಕಿತ್ಸೆ ನೀಡದೆ ಬಿಟ್ಟರೆ ಅದು 3 ವರ್ಷಗಳ ಅಲ್ಪಾವಧಿಯಲ್ಲಿ ರೋಗಿಯ ಮರಣಕ್ಕೆ ಕಾರಣವಾಗುವ ಸಾಮರ್ಥ್ಯವನ್ನು ಹೊಂದಿದೆ.
ಇದೀಗ ಚಿಕಿತ್ಸೆ ಪಡೆದ ಮಹಿಳೆ ಕಳೆದ ಒಂದು ವರ್ಷದಿಂದ ಹೊಟ್ಟೆಯ ಊತದಿಂದ ಬಳಲುತ್ತಿದ್ದರು. ಆರಂಭದಲ್ಲಿ ಅವರು ಮತ್ತು ಅವರ ಕುಟುಂಬದವರು ಅದನ್ನು ನಿರ್ಲಕ್ಷಿಸಿದರು, ಆದರೆ ದಿನಗಳು ಕಳೆದಂತೆ ಊತ ಪ್ರಾರಂಭವಾಯಿತು, ಅಂತಿಮವಾಗಿ ಅವರು ವೈದ್ಯರನ್ನು ಸಂಪರ್ಕಿಸಿದರು. ನಿವೇದಿತ ಅವರಿಗೆ ಊತ ಮತ್ತು ಅದರಿಂದಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಹೊಟ್ಟೆಯಿಂದ ದ್ರವವನ್ನು ತೆಗೆಯಲು ಸಲಹೆ ನೀಡಲಾಯಿತು. ಸುಮಾರು ಒಂದು ವರ್ಷದವರೆಗೆ ದ್ರವವನ್ನು ತೆಗೆಯುವ ಪ್ರ ಕ್ರಿಯೆಗೆ ಒಳಗಾಗಿದ್ದರು, ಆದರೆ ಅವರ ಸ್ಥಿತಿ ಸುಧಾರಿಸಲಿಲ್ಲ. ದ್ರವವನ್ನು ತೆಗೆಯುವ ಪ್ರಕ್ರಿಯೆಯು ಅವರ ಜೀವನ ಗುಣಮಟ್ಟ, ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಪ್ರಾರಂಭಿಸಿತು. ಇದರಿಂದಾಗಿ ಆಕೆಯ ಕುಟುಬದವರು ಚಿಂತೆಗೀಡಾದರು. ಬಳಿಕ ಅವರನ್ನು ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆಸ್ಪತ್ರೆಗೆ ದಾಖಲಿಸಿದ ಬಳಿಕ ಅವರ ಹೊಟ್ಟೆಯಲ್ಲಿ ಊತ ಮಾತ್ರವಲ್ಲದೆ, ಅವರು ಉಸಿರಾಡಲು ತೊಂದರೆಯಿಂದ ಬಳಲುತ್ತಿದ್ದರು. ಡಾ.ಸತೀಶ್ ರಾವ್ ಅವರ ತಂಡವು ಆಕೆಗೆ ತಕ್ಷಣ ಚಿಕಿತ್ಸೆ ಪ್ರಾರಂಭಿಸಿತು, ಮತ್ತು ಆಕೆ ಚೇತರಿಸಿಕೊಂಡ ನಂತರ ಅವರಿಗೆ ಸಂಪೂರ್ಣ ವೈದ್ಯಕೀಯ ಪರೀಕ್ಷೆ ಮಾಡಲಾಯಿತು . ತಂಡವು ಸಿ.ಟಿ ಸ್ಕ್ಯಾನ್, ಎಂಡೋಸ್ಕೋಪಿ ಮತ್ತು ಎಂ.ಆರ್. ವೆನೋಗ್ರಾಮ್ ಪರೀಕ್ಷೆಗಳನ್ನು ನಡೆಸಿತು, ಪರೀಕ್ಷೆಯಲ್ಲಿ ಅವರು ದೀರ್ಘಕಾಲದ ಬಡ್-ಚಿಯಾರಿ ಸಿಂಡ್ರೋಮ್ನಿಂದ ಬಳಲುತ್ತಿರುವುದು ತಿಳಿದುಬಂದಿತು. ಧೀರ್ಘ ಕಾಲದ ಈ ಸ್ಥಿತಿಯಿಂದಾಗಿ ಆಕೆಯ ಹೆಪಾಟಿಕ್ ನಾಳಗಳಲ್ಲಿ ಬ್ಲಾಕೇಜ್ ಉಂಟಾಗಿತ್ತು.
ಆಕೆಗೆ ವೈದ್ಯರು DIPS (ಡೈರೆಕ್ಟ್ ಇಂಟ್ರಾಹೆಪಾಟಿಕ್ ಪೋರ್ಟೊಕಾವಲ್ ಷಂಟ್) ಮಾಡಿದರು. ಈ ಕಾರ್ಯವಿಧಾನವು ಯಶಸ್ವಿಯಾಗಿದ್ದು, ರೋಗಿಯನ್ನು ಎರಡು ದಿನಗಳಲ್ಲಿ ವಾರ್ಡ್ಗೆ ಸ್ಥಳಾಂತರಿಸಲಾಯಿತು. ಅವರೀಗ ಮೈಸೂರು ಪ್ರದೇಶದಲ್ಲಿ DIPS ಕಾರ್ಯವಿಧಾನಕ್ಕೆ ಒಳಗಾದ ಮೊದಲನೆಯವರಾಗಿದ್ದಾರೆ.