ಬೆಂಗಳೂರು: ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಗಂಭೀರವಾದ ಸುಟ್ಟ ಗಾಯಗಳಿಂದ ರಕ್ಷಿಸಲ್ಪಟ್ಟು, ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಗ್ರೂಪ್ ಕಮಾಂಡರ್ ಕ್ಯಾ.ವರುಣ್ ಸಿಂಗ್ ಬುಧವಾರ(ಡಿಸೆಂಬರ್ 15) ಕೊನೆಯುಸಿರೆಳೆದಿದ್ದಾರೆ.
ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ ಗ್ರೂಪ್ ಕಮಾಂಡರ್ ಕ್ಯಾ.ವರುಣ್ ಸಿಂಗ್ ಅವರನ್ನು ಬೆಂಗಳೂರಿನ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿರುವುದಾಗಿ ವರದಿ ತಿಳಿಸಿದೆ.
ದೇಶದ ಮೂರು ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಇತರ 12 ಮಂದಿ ತಮಿಳುನಾಡಿನಲ್ಲಿ ಸಂಭವಿಸಿದ್ದ ಭೀಕರ ದುರಂತದಲ್ಲಿ ವಿಧಿವಶರಾಗಿದ್ದು, ದುರಂತದಲ್ಲಿ ಬದುಕುಳಿದ ಏಕೈಕ ಗಾಯಾಳು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೀವ್ರ ಸುಟ್ಟ ಗಾಯದಿಂದ ಬಳಲುತ್ತಿರುವ ಪೈಲಟ್ ಕ್ಯಾ.ವರುಣ್ ಸಿಂಗ್ ಅವರನ್ನು ವೆಲ್ಲಿಂಗ್ಟನ್ ನ ಮಿಲಿಟರಿ ಆಸ್ಪತ್ರೆಯಿಂದ ಆಯಂಬುಲೆನ್ಸ್ ನಲ್ಲಿ ಸೂಲೂರು ವಾಯುನೆಲೆಗೆ ತರಲಾಗಿದ್ದು, ಅಲ್ಲಿಂದ ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಸ್ಥಳಾಂತರಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು.
ಡಿಸೆಂಬರ್ 8ರಂದು ನಡೆದಿದ್ದ ದುರಂತದಲ್ಲಿ ಮೂರು ಸೇನೆಯ ಮಹಾದಂಡನಾಯಕ ಜ.ಬಿಪಿನ್ ರಾವತ್, ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದರು. ಆದರೆ ದುರಂತದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಗಂಭೀರವಾದ ಸುಟ್ಟ ಗಾಯಗಳಿಂದ ಬದುಕುಳಿದಿದ್ದ ಏಕೈಕ ಸಾಕ್ಷಿಯಾಗಿದ್ದರು. ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಇಂದು ಸಿಂಗ್ ವಿಧಿವಶರಾಗಿದ್ದಾರೆ. ಇದರೊಂದಿಗೆ ಹೆಲಿಕಾಪ್ಟರ್ ದುರಂತದಲ್ಲಿ ಎಲ್ಲಾ 14 ಮಂದಿಯೂ ಮಡಿದಂತಾಗಿದೆ.
ಪ್ರಧಾನಿ ಮೋದಿ ಸಂತಾಪ:
ಕ್ಯಾಪ್ಟನ್ ವರುಣ್ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದು, ವರುಣ್ ಸಿಂಗ್ ಸೇವೆಯನ್ನು ಈ ದೇಶ ಎಂದಿಗೂ ಮರೆಯುವುದಿಲ್ಲ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.