ಬೆಂಗಳೂರು: ಕೈ ನೋವೆಂದು ಆಸ್ಪತ್ರೆಗೆ ಬಂದ ಯುವತಿ ಸಾವನ್ನಪ್ಪಿದ್ದು, ಇದೀಗ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಗಂಭೀರ ಆರೋಪ ಮಾಡುತ್ತಿದ್ದಾರೆ. ಯುವತಿಯನ್ನು ತೇಜಸ್ವಿನಿ(20) ಎಂದು ಗುರುತಿಸಲಾಗಿದೆ. ತೇಜಸ್ವಿನಿ ಕೈಗೆ ಗಾಯವಾಗಿತ್ತು.
ಹೀಗಾಗಿ ಆಕೆಯನ್ನು ಇಂದು ಬೆಳಗ್ಗೆ ಮಾರತಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಇದೀಗ ಯುವತಿ ಸಾವನ್ನಪ್ಪಿದ್ದು, ಖಾಸಗಿ ಆಸ್ಪತ್ರೆಯ ಎಡವಟ್ಟಿನಿಂದಲೇ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ತೇಜಸ್ವಿನಿ ಅಂತಿಮ ವರ್ಷದ ಬಿಇ ಓದುತ್ತಿದ್ದಾಳೆ.
ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದ ತೇಜಸ್ವಿನಿಗೆ ಆಪರೇಷನ್ ಮಾಡಬೇಕೇಂದು ಆಸ್ಪತ್ರೆ ಸಿಬ್ಬಂದಿ ಅನಾಸ್ತೇಶಿಯಾ ನೀಡಿದ್ದಾರೆ. ಎರಡು ಗಂಟೆ ಬಳಿಕ ನಿಮ್ಮ ಮಗಳು ಬದುಕಿಲ್ಲ ಎಂದು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾರತಹಳ್ಳಿ ಪೊಲೀಸರು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ. ಆಸ್ಪತ್ರೆ ಬಳಿ ಪೊಲೀಸರು ಮತ್ತು ಪೋಷಕರ ನಡುವೆ ಜಟಾಪಟಿ ನಡೆದಿದೆ. ನಮಗೆ ವಿಷ ಕೊಡಿ ಇಲ್ಲ ನ್ಯಾಯ ಕೊಡಿಸಿ ಎಂದು ತೇಜಸ್ವಿನಿ ಪೋಷಕರು ಆಸ್ಪತ್ರೆ ಒಳಗೆ ಪ್ರತಿಭಟನೆಗೆ ಕುಳಿತಿದ್ದಾರೆ.