ಬೆಂಗಳೂರು: ಯೋಜನೆಗಳ ಜಾರಿ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಚಿವರ ಕೆಸರು ಎರಚಾಟ ಮುಂದುವರೆದಿದೆ.
ಕೇಂದ್ರ ಯೋಜನೆಯನ್ನು ರಾಜ್ಯ ಸರ್ಕಾರ ತನ್ನದು ಎಂಬಂತೆ ಬಿಂಬಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಸಂಸದರು ಬಾಯಿ ಬಡಿದುಕೊಳ್ಳುತ್ತಿರುವ ಬೆನ್ನಲ್ಲೇ ಇದೀಗ ಕೇಂದ್ರ ಜಾರಿಗೆ ತಂದಿರುವ ಶಾದಿ ಶಗೂನ್ ಯೋಜನೆ ವಿರುದ್ಧ ಹರಿಹಾಯ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅಲ್ಪಸಂಖ್ಯಾತರನ್ನು ಓಲೈಸುವ ತಂತ್ರ ಎಂದು ಟೀಕೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯ ಸರ್ಕಾರದ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ನಕಲು ಮಾಡುತ್ತಿದೆ ಎಂದು ದೂರಿದ್ದಾರೆ.
ರಾಜ್ಯ ಸರ್ಕಾರ ಶಾದಿಭಾಗ್ಯ ಯೋಜನೆ ಜಾರಿ ಮಾಡಿದಾಗ ಬಿಜೆಪಿಯವರು ವಿರೋಧಿಸಿದ್ದರು. ಆದರೆ ಈಗ ಬಿಜೆಪಿ ಆಡಳಿತವಿರುವ ಕೇಂದ್ರ ಸರ್ಕಾರ ಶಾದಿ ಶಗೂನ್ ಅನುಷ್ಠಾನಗೊಳಿಸುತ್ತಿದ್ದು ಇದಕ್ಕೇನು ಹೇಳುತ್ತಾರೆ ಎಂದು ಉಮಾಶ್ರೀ ಪ್ರಶ್ನಿಸಿದ್ದಾರೆ.
ಈ ನಡುವೆ ಉಮಾಶ್ರೀ ಅವರ ಹೇಳಿಕೆಗೆ ಪ್ರತಿಕ್ರಿಯಿ ನೀಡಿರುವ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಕೇಂದ್ರ, ಸರ್ಕಾರ ಶಾದಿಭಾಗ್ಯ ಯೋಜನೆ ಜಾರಿಗೆ ತರುವ ಖಚಿತ ಮಾಹಿತಿ ಇಲ್ಲ. ಇಂತಹ ಊಹಾಪೋಹಗಳಿಗೆ ಉತ್ತರಿಸುವುದು ಸರಿಯಲ್ಲ ಎಂದರು.
ಕೇಂದ್ರ ಸರ್ಕಾರ ಯಾವುದೇ ಜಾತಿ, ಧರ್ಮಕ್ಕೆ ಯೋಜನೆಗಳನ್ನು ಜಾರಿಗೆ ತರುವುದಿಲ್ಲ. ಶಾದಿ ಶಗೂನ್ ಯೋಜನೆಯ ಸ್ವರೂಪವೇನು, ಯಾವ ಸಮುದಾಯಗಳಿಗೆ ಇದು ಅನ್ವಯವಾಗಲಿದೆ ಎಂಬಂತೆ ಶಾದಿ ಶಗೂನ್ ಯೋಜನೆ ಅಧಿಕೃತವಾಗಿ ಜಾರಿಯಾದ ಮೇಲೆ ತಿಳಿಯಲಿದೆ ಎಂದು ಹೇಳಿದ್ದಾರೆ.