ಬೆಂಗಳೂರು: ಚುನಾವಣಾ ಪ್ರಚಾರದ ವೇಳೆ ಲಂಗುಲಗಾಮಿಲ್ಲದೆ ಮಹಿಳೆಯರ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿ ಮಾತನಾಡುವುದಲ್ಲದೆ, ತೇಜೋವಧೆ ಮಾಡುವ ಯತ್ನ ನಡೆಸಿದರೆ ಅಂತಹವರ ವಿರುದ್ಧ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಎಚ್ಚರಿಕೆಯನ್ನು ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣಾ ಪ್ರಚಾರದ ಭರಾಟೆ ಮುಂದುವರೆದಿದ್ದು, ಕೆಲವು ನಾಯಕರು ಎದುರಾಳಿ ಮಹಿಳಾ ಅಭ್ಯರ್ಥಿ ಎಂಬುದನ್ನು ಮರೆತು ಕೀಳುಮಟ್ಟದ ಮಾತುಗಳನ್ನಾಡುತ್ತಿದ್ದು, ಇಂತಹ ಹೇಳಿಕೆಗಳು ಕೇಳಿ ಬಂದರೆ ಅಂಥ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದರು.
ಈಗಾಗಲೇ ಟಿಕ್ಟಾಕ್ನಲ್ಲಿ ಮಹಿಳೆಯರ ವಿಡಿಯೋಗಳನ್ನು ಅಸಭ್ಯವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರು ಆಯೋಗಕ್ಕೆ ಬಂದಿರುವ ಕಾರಣ ಟಿಕ್ಟಾಕ್ ನಿಷೇಧಿಸುವಂತೆ ನ್ಯಾಯಾಲಯದ ಮೊರೆ ಹೋಗಲು ಆಯೋಗ ತೀರ್ಮಾನಿಸಿದೆ ಎಂಬುದಾಗಿಯೂ ಇದೇ ಸಂದರ್ಭ ತಿಳಿಸಿದ್ದಾರೆ.