ಬೆಂಗಳೂರು : ಕರೊನಾ ನಾಲ್ಕನೇ ಅಲೆ ಇದೇ ಆಗಸ್ಟ್ನಲ್ಲಿ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಐಐಟಿ ಕಾನ್ಪುರ ತಜ್ಞರು ಅಂದಾಜಿಸಿದ್ದಾರೆ. ಹೊಸ ಪ್ರಭೇದ ಹೊತ್ತು ತರುವ ನಾಲ್ಕನೇ ಅಲೆ ಬಗ್ಗೆ ಜನರಿಗೆ ಆತಂಕ ಬೇಡ. ಆದರೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದರೆ ಸಾಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ವಿಧಾನ ಪರಿಷತ್ನಲ್ಲಿ ಶೂನ್ಯ ವೇಳೆ ಬಿಜೆಪಿಯ ಶಶೀಲ್ ನಮೋಶಿ ಈ ವಿಷಯ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಸುಧಾಕರ್, ಈಗಾಗಲೇ ಶೇ.100 ಮೊದಲ ಡೋಸ್, ಶೇ.96 ಎರಡನೇ ಡೋಸ್ ಲಸಿಕೆ ವಿತರಿಸಲಾಗಿದೆ. ಬೂಸ್ಟರ್ ಡೋಸ್ ಹಾಗೂ ಮಕ್ಕಳಿಗೆ ಲಸಿಕೆ ವಿತರಣೆ ಪ್ರಗತಿಯಲ್ಲಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಶೀಘ್ರವೇ ಸಭೆ ಕರೆದು ಮಾಸ್ಕ್ ಕಡ್ಡಾಯ ಸೇರಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿ ನಾಲ್ಕನೇ ಅಲೆ ಎದುರಿಸಲು ಅಗತ್ಯ ತಯಾರಿ ಮಾಡಿಕೊಳ್ಳಲಾಗುವುದು ಎಂದರು.
ಬೇಕಾದ ಆರೋಗ್ಯ ಪರಿಕರಗಳಿವೆ, ಆಕ್ಸಿಜನ್, ಹಾಸಿಗೆ ಇನ್ನಿತರ ಅನುಕೂಲತೆಗಳಿವೆ. ಮೂರು ಅಲೆಗಳನ್ನು ನಿಭಾಯಿಸಿದ ಅನುಭವವುಳ್ಳ ನುರಿತ ವೈದ್ಯರು ಮತ್ತು ಸಿಬ್ಬಂದಿ ಇದ್ದಾರೆ. ಆದರೆ, ಸೋಂಕು ಹರಡದಂತೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಡಾ.ಸುಧಾಕರ್ ಮಾಹಿತಿ ನೀಡಿದರು.