ಬೆಂಗಳೂರು, ಮೇ 17: ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ನಿಧನರಾಗಿದ್ದಾರೆ. ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದ ನಟಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಅನುಮತಿ ಇಲ್ಲದೆ ಸರ್ಜರಿಗೆ ಒಳಗಾಗಿದ್ದರು. ಸರ್ಜರಿ ಸರಿಯಾಗದೆ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಆಕೆ ಸಾವಾಗಿದೆ ಎಂದು ಆಪ್ತರು ದೂರಿದ್ದಾರೆ.
ಬೆಂಗಳೂರಿನ ಸುಬ್ರಹ್ಮಣ್ಯ ನಗರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಫ್ಯಾಟ್ ರಿಡಕ್ಷನ್ ಸರ್ಜರಿ ಎಂದು ಕರೆಯಲಾಗುವ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಆಕೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ರಾಜಾಜಿನಗರ ಬಳಿ ಇರುವ ಶೆಟ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಚೇತನಾ ಅವರ ದೇಹದ ಕೊಬ್ಬು ತೆಗೆಯುವ ವೇಳೆ, ಶ್ವಾಸಕೋಶಕ್ಕೆ ನೀರು ಸೇರಿಕೊಂಡಿದ್ದು, ಆಕೆಯನ್ನು ಉಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
22 ವರ್ಷ ವಯಸ್ಸಿನ ಚೇತನಾ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ದೂರಿದ್ದಾರೆ. ಆಸ್ಪತ್ರೆ ಬಳಿ ಚೇತನಾರ ಅಪ್ಪ ವರದರಾಜ್ ಹಾಗೂ ತಾಯಿ ಲಕ್ಷ್ಮಿ ಕಣ್ಣೀರಿಟ್ಟು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ವೈದ್ಯರು ಹಾಗೂ ಆಸ್ಪತ್ರೆ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
”ಆಕೆ ನೋಡೋಕೆ ದಪ್ಪ ಇರಲಿಲ್ಲ, ಲವಲವಿಕೆಯಿಂದಲೇ ಇದ್ದಳು, ಈ ಬೇಡದ ಸರ್ಜರಿ ಬಗ್ಗೆ ಆಕೆ ತಲೆಗೆ ಇಲ್ಲಿನ ವೈದ್ಯರುಗಳೇ ತುಂಬಿದ್ದಾರೆ. ಅನಗತ್ಯ ಸರ್ಜರಿಗೆ ಒಳಪಟ್ಟು ಆಕೆಯನ್ನು ಕಳೆದುಕೊಂಡೆವು. ನಿನ್ನೆ ಚೆನ್ನಾಗಿ ಮಾತನಾಡಿಕೊಂಡಿದ್ದ ಆಕೆ, ಇಂದು ಇಲ್ಲ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ,” ಎಂದು ಚೇತನಾ ಅವರ ಆಪ್ತರು ಗೋಳು ತೋಡಿಕೊಂಡಿದ್ದಾರೆ.
ಬೆಂಗಳೂರಿನ ಅಬ್ಬಿಗೆರೆ ಮೂಲದ ಚೇತನಾ ಅವರು ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಿದ್ದರು. ಹವಾಯಾಮಿ ಎಂಬ ಸಿನಿಮಾದಲ್ಲಿ ನಟಿಸಿದ್ದ ಈಕೆ, ಜನಪ್ರಿಯ ಮನರಂಜನಾ ವಾಹಿನಿಯ ಗೀತಾ, ದೊರೆಸಾನಿ ಧಾರಾವಾಹಿಗಳಲ್ಲಿ ನಟಿಸಿದ್ದರು ಎಂದು ತಿಳಿದು ಬಂದಿದೆ.