ಬೆಂಗಳೂರು: ಬನ್ನಿ ಒಎಲ್ ಎಕ್ಸ್ ನಲ್ಲಿ ಮಾರಿಬಿಡಿ ಎನ್ನುವ ಮಾತನ್ನು ನಂಬಿದ ಟೆಕ್ಕಿಯೊಬ್ಬರು ತನ್ನ ಕಾರನ್ನು ಮಾರಲು ಹೋಗಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.
ಬಿಹಾರ ಮೂಲದ, ಬೆಳ್ಳಂದೂರಿನ ಬ್ರಿಟಿಷ್ ಟೆಲಿಕಾಂನಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕುಮಾರ್ ಅಜಿತಾಭ್(30) ಎಂಬವರೇ ನಾಪತ್ತೆಯಾಗಿರುವವರು.
ತಮ್ಮ ಸಿಯಾಜ್ ಕಾರು ಮಾರಾಟಕ್ಕಿದೆ ಎಂದು ಅಜಿತಾಭ್ ಒಎಲ್ ಎಕ್ಸ್ ನಲ್ಲಿ ಹಾಕಿದ್ದರು. ಖರೀದಿದಾರರಿಂದ ಕರೆ ಬಂದಾಗ ಇವರು ಕಾರಿನೊಂದಿಗೆ ಹೊರ ಹೋಗಿ ಬರುತ್ತಿದ್ದರು. ಡಿ.18ರಂದು ಕೂಡ ಅಜಿತಾಭ್ ಮೊಬೈಲ್ ಗೆ ಕರೆ ಬಂದಿದೆ. ಇದರ ಬಳಿಕ ಅವರು ನಾಪತ್ತೆಯಾಗಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಅಜಿತಾಭ್ ನಾಪತ್ತೆ ಬಗ್ಗೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಿದ್ದಾರೆ.