ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ ‘ಸಾಮ್ರಾಜ್ಯ’ವನ್ನು ಅದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶೋಧಿಸಿದ್ದು, ರೂ.300 ಕೋಟಿಯಷ್ಟು ಅಘೋಷಿತ ಆಸ್ತಿ ಬಗ್ಗೆ ಮಾಹಿತಿ ದೊರಕಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಗಳು ತಿಳಿಸಿವೆ.
ಸುಧೀರ್ಘ 74 ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಶಿವಕುಮಾರ್ ಮತ್ತವರ ಸಂಬಂಧಿಕರು, ಸ್ನೇಹಿತರು, ಆಪ್ತರ ನಿವಾಸ, ಕಚೇರಿಗಳ ಮೇಲೆ ನಡೆದ ಕಾರ್ಯಾಚರಣೆಯಲ್ಲಿ ಈ ಅಘೋಷಿತ ಆಸ್ತಿ ಪತ್ತೆಯಾಗಿದ್ದು, ಅಪಾರ ಪ್ರಮಾಣದ ದಾಖಲೆಗಳನ್ನು ಕಳೆದ ಮೂರು ದಿನಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಶನಿವಾರ ಮಧ್ಯಾಹ್ನದ ಬಳಿಕ ತಡರಾತ್ರಿವರೆಗೆ ದಾಖಲೆಗಳ ಪರಾಮರ್ಶೆ ನಡೆಸಿದರು. ಅಧಿಕಾರಿಗಳು 80ಕ್ಕೂ ಹೆಚ್ಚು ಸ್ಥಳಗಳ ಪರಿಶೀಲನೆ ನಡೆಸಿದಾಗ ಒಟ್ಟಾರೆ ರೂ.300 ಕೋಟಿಯಷ್ಟು ಅಘೋಷಿತ ಆಸ್ತಿ ಬಹಿರಂಗಗೊಂಡಿದೆ. ಒಟ್ಟು ರೂ.15 ಕೋಟಿಯಷ್ಟು ನಗದು ಸೇರಿ ರೂ.100 ರಷ್ಟು ಆಭರಣಗಳಿರುವುದು ಗೊತ್ತಾಗಿದೆ. ಇನ್ನುಳಿದ ರೂ.200 ಕೋಟಿಗಳ ಕುರಿತ ದಾಖಲೆಗಳನ್ನು ಬಹಳ ಎಚ್ಚರಿಕೆಯಿಂದ ಪರಿಶೀಲನೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಅಧಿಕಾರಿಗಳು 3 ದಿನಗಳ ಕಾಲ ಸದಾಶಿವನಗರದ ನಿವಾಸದಲ್ಲಿ ಮೊಕ್ಕಾಂ ಹೂಡಿದ್ದು, ದಾಖಲೆಗಳನ್ನು ಹಿಡಿದು ಪ್ರತಿಯೊಂದಕ್ಕೂ ಸ್ಪಷ್ಟನೆ ಕೇಳಿದ್ದರು. ಎಲ್ಲದಕ್ಕೂ ವಿವರಣೆ ನೀಡಿದ ಸಚಿವರು ತಕ್ಷಣ ಲಭ್ಯವಾಗದ ದಾಖಲೆಗಳನ್ನು ಶೀಘ್ರದಲ್ಲಿಯೇ ಇಲಾಖೆಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆಂದು ಸುದ್ದಿ ಮೂಲಗಳು ತಿಳಿಸಿವೆ.
ರಾಜ್ಯಪಾಲ ವಜುಭಾಯ್ ವಾಲಾ ಅವರನ್ನು ಭೇಟಿ ಮಾಡಲು ರಾಜಭವನಕ್ಕೆ ತೆರಳುತ್ತಿದ್ದ 44 ಗುಜರಾತಾ ಕಾಂಗ್ರೆಸ್ ಶಾಸಕರ ಜೊತೆಗೂಡಿದ ಡಿ.ಕೆ.ಶಿ ರಾಜ್ಯಪಾಲರನ್ನು ಭೇಟಿ ಮಾಡುವುದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿ, ಸಂವಿಧಾನವನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ಎಲ್ಲಾ ಆರೋಪಗಳಿಗೆ ದಾಖಲೆಗಳ ಸಮೇತ ಸೂಕ್ತ ಕಾಲದಲ್ಲಿ ಉತ್ತರ ನೀಡುತ್ತೇನೆ. ಪಂಚನಾಮೆ ವರದಿ ಆಧರಿಸಿ ಮಾಧ್ಯಮಗಳಿಗೆ ಉತ್ತರ ಕೊಡುವೆ ಎಂದು ಹೇಳಿದ್ದಾರೆ.