ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಟುಂಬಗಳಿಗೆ 75 ಯೂನಿಟ್ ವಿದ್ಯುತ್ನ್ನು ಉಚಿತವಾಗಿ ಸರಬರಾಜು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಡಾ. ಬಾಬು ಜಗಜೀವನರಾಮ್ ಅವರ 115ನೇ ಜನ್ಮದಿನಾಚರಣೆ ಹಾಗೂ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಪರಿಶಿಷ್ಟ ಜಾತಿ, ಪಂಗಡದವರಿಗೆ ಬಹಳಷ್ಟು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಇದರ ಸೌಲಭ್ಯವನ್ನು ಈ ಜನಾಂಗ ಪಡೆಯುತ್ತಿದೆ. ಪರಿಶಿಷ್ಟರಿಗೆ ಭೂ ಒಡೆತನ ಯೋಜನೆಯಡಿ ನೀಡುವ ಮೊತ್ತವನ್ನು 15 ಲಕ್ಷದಿಂದ 50 ಲಕ್ಷ ರೂಗಳಿಗೆ ಹೆಚ್ಚಿಸುವುದಾಗಿ ತಿಳಿಸಿದರು.
ಈ ಜನಾಂಗದವರು ಹೊಸದಾಗಿ ಸ್ಟಾರ್ಟ್ ಅಪ್ ಪ್ರಾರಂಭಿಸಿದರೆ 50 ಲಕ್ಷ ಸಹಾಯಧನವನ್ನು ಸರ್ಕಾರವೇ ನೀಡುತ್ತದೆ. ಪ್ರತಿ ತಾಲ್ಲೂಕಿಗೆ ಸ್ವಯಂ ಉದ್ಯೋಗ ಯೋಜನೆಯಡಿ ಬಾಬು ಜನಜೀವನರಾಮ್ ಹೆಸರಿನಲ್ಲಿ ಉದ್ಯೋಗ ಕೇಂದ್ರ ಸ್ಥಾಪಿಸಲಾಗುವುದು. ಪರಿಶಿಷ್ಟ ಜಾತಿ, ಪಂಗಡದವರಿಗೆ ಮನೆ ಕಟ್ಟಲು ನೀಡಲಾಗುತ್ತಿದ್ದ ಸಹಾಯಧನವನ್ನು ಒಂದು ಲಕ್ಷ ಎಪ್ಪತ್ತೈದು ಸಾವಿರದಿಂದ ಎರಡು ಲಕ್ಷಕ್ಕೆ ಹೆಚ್ಚಿಸಲಾಗುವುದು. ಈ ಜನಾಂಗದ ವಿದ್ಯಾರ್ಥಿಗಳ ಉಪಯೋಗಕ್ಕೆ ನೂತನ ವೆಬ್ಸೈಟ್ ಆರಂಭಿಸಿ ಅವರ ಕಲಿಕೆಗೆ ಸಹಾಯ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಹಾಗೂ ಹಿಂದುಳಿದವರ್ಗಗಳ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಹಾಗೂ ಸವಲತ್ತು ನೀಡಲು ಸರ್ಕಾರ ಎಲ್ಲಾ ರೀತಿಯಲ್ಲಿಯೂ ಶ್ರಮಿಸುತ್ತಿದೆ. ಸಮಾನತೆಯ ದಾರಿ ತೋರಿಸಿಕೊಟ್ಟವರು ರಾಷ್ಟ್ರ ಕಂಡ ದೀಮಂತ ನಾಯಕ ಡಾ. ಬಾಬು ಜಗಜೀವನರಾಂ ಅವರು. ಇವರ ಕ್ರಾಂತಿಕಾರಿ ಕೆಲಸಗಳು ಎಲ್ಲಾರಿಗೂ ದಾರಿದೀಪವಾಗಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ೫ ಜನರಿಗೆ ಡಾ.ಬಾಬು ಜಗಜೀವನರಾಂ ಪ್ರಶಸ್ತಿ ನೀಡಿ ಗೌರವಿಸಲಾಯಿತು.