ಬೆಂಗಳೂರು : ಇಂದು ಮುಂಜಾನೆ ವಿಡಿಯೋ ಕರೆ ಮೂಲಕ ಯುದ್ದ ಪೀಡಿತ ಯುಕ್ರೇನ್ ನಲ್ಲಿ ಸಿಲುಕಿರುವ ಹಾಸನ ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ ಧೈರ್ಯ ತುಂಬಿದರು.
ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಯುಕ್ರೇನ್ ನಲ್ಲಿರುವ ವಿದ್ಯಾರ್ಥಿಗಳು ಮತ್ತು ಭಾರತೀಯ ನಾಗರೀಕರನ್ನು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸುರಕ್ಷಿತವಾಗಿಕರೆ ತಂದಿದೆ. ಉಳಿದವರನ್ನು ಕರೆತರುವ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ನಿಮ್ಮನ್ನು ಕೂಡ ಶೀಘ್ರವೇ ಕರೆ ತರಲು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಮೂಲತಃ ಹಾಸನ ಜಿಲ್ಲೆಯ ಬೆಂಗಳೂರಿನ ನಿವಾಸಿ ಪೂರ್ಣ ಅವರೊಂದಿಗೆ ಹದಿನೈದು ನಿಮಿಷಕ್ಕೆ ಹೆಚ್ಚು ಕಾಲ ಮಾತನಾಡಿದ ಸಚಿವರು ಎಂಥಹುದೆ ಸಂದರ್ಭ ಬಂದರೂ ಧೈರ್ಯಗೆಡದೆ ಆತ್ಮ ಸ್ಥೈರ್ಯ ದಿಂದ ಎದುರಿಸಲು ಸಲಹೆ ನೀಡಿದರು.
ಯುದ್ಧ ಪೀಡಿತ ನಗರದಲ್ಲಿ ನೀರು, ಆಹಾರ, ರಕ್ಷಣೆ ಇತರೆ ಮೂಲಭೂತ ಸೌಕರ್ಯಗಳ ಲಭ್ಯತೆ ಕುರಿತು ಮಾಹಿತಿ ಪಡೆದ ಸಚಿವರು, ಅವಕಾಶ ಸಿಕ್ಕಾಗ ಸಾಧ್ಯವಾದಷ್ಟು ಹೆಚ್ಚು ನೀರು ಮತ್ತು ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ತಿಳಿಸಿದರಲ್ಲದೆ ಯಾವುದೇ ಸಮದಲ್ಲಾದರೂ ಕೂಡ ತಮ್ಮದೂರವಾಣಿ ಸಂಖ್ಯೆಗೆ ಕರೆ ಮಾಡಲು ತಿಳಿಸಿದರು.
ಇದೇ ವೇಳೆ ಬೆಳಗಾವಿ ಜಿಲ್ಲೆಯ ಅಥಣಿಯ ರಕ್ಷಿತ್ ಎಂಬ ವಿದ್ಯಾರ್ಥಿಯೊಂದಿಗೂ ಕೂಡ ಮಾತನಾಡಿದ ಸಚಿವರು ನಿಮ್ಮ ಜೊತೆಯಲ್ಲಿರುವ ಎಲ್ಲರಿಗೂ ಧೈರ್ಯ ದಿಂದ ಇರಲು ತಿಳಿಸಿದರು.ಬೆಂಗಳೂರಿನ ಮಾಗಡಿ ರಸ್ತೆಯ ಕಾರ್ತಿಕ್ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳ ವಿದ್ಯಾರ್ಥಿಗಳ ಜೊತೆ ಮಾತನಾಡಿದರು.