ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ವಿರುದ್ಧ ಲಂಚ ಆರೋಪ ಹೊರಿಸುವ ಮೂಲಕ ಷಡ್ಯಂತ್ರ ನಡೆಸುತ್ತಿದ್ದು, ಇಂತಹ ಕುತಂತ್ರಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಜನೇಯ ಅವರನ್ನು ಸಂಪುಟದಿಂದ ಕೈಬಿಟ್ಟಲ್ಲಿ ರಾಜ್ಯಾದ್ಯಂತ ಮತ್ತೆ ಚಳವಳಿ ನಡೆಯಲಿದೆ ಎಂದು ದಲಿತ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಮಾಜಿ ರಾಜ್ಯಪಾಲ ದಿವಂಗತ ಬಿ. ರಾಚಯ್ಯ ಅವರ ನಂತರ ದಲಿತ ಸಮುದಾಯದ ಆಂಜನೇಯ ಅವರಿಗೆ ಸಮಾಜ ಕಲ್ಯಾಣ ಖಾತೆ ದೊರೆತಿದ್ದು, ಅವರನ್ನು ಯಾವುದೇ ಕಾರಣಕ್ಕೂ ಖಾತೆಯಿಂದ ಬದಲಿಸಬಾರದು. ಅವರನ್ನು ಸಂಪುಟದಿಂದ ಕೈ ಬಿಡಬಾರದು ಎಂದು ಒತ್ತಾಯಿಸಿವೆ.
ಸಚಿವ ಆಂಜನೇಯ ಸಚಿವ ಸಂಪುಟದಲ್ಲಿ ಅತ್ಯಂತ ಕ್ರಿಯಾಶೀಲ ಸಚಿವರಾಗಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಜನಸಂಖ್ಯೆಗೆ ಅನುಗುಣವಾಗಿ ಹಣ ನಿಗದಿ ಮಾಡಿ ಈ ಸಮುದಾಯದ ಶ್ರೇಯೋಭಿವೃದ್ಧಿಗೆ ಕ್ರಾಂತಿಕಾರಕ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ವ್ಯವಸ್ಥಿತ ಪಿತೂರಿ ನಡೆಸುತ್ತಿವೆ. ಇದರ ಹಿಂದೆ ಬಹುದೊಡ್ಡ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.
ಯಾವುದೇ ಕಾರಣಕ್ಕೂ ಇಂತಹ ಷಡ್ಯಂತ್ರಗಳು ಯಶಸ್ವಿಯಾಗುವುದಿಲ್ಲ. ತಾವು ಅದಕ್ಕೆ ಅವಕಾಶ ನೀಡಿದಲ್ಲಿ ದಲಿತ ಸಮುದಾಯ ಮತ್ತು ಈ ನಾಡಿನ ಪ್ರಗತಿಪರ ಮನಸ್ಸುಗಳು ಸರ್ಕಾರದ ಬಗ್ಗೆ ಇಟ್ಟುಕೊಂಡಿರುವ ಸದಾಶಯಗಳು ಮಣ್ಣು ಪಾಲಾಗಲಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಇದರ ಹಿಂದಿರುವ ಶಕ್ತಿಗಳು ಪತ್ತೆಯಾಗಬೇಕು. ಹಾಗೊಂದು ವೇಳೆ ಅವರು ತಪ್ಪಿತಸ್ಥರು ಎಂದು ಕಂಡು ಬಂದಲ್ಲಿ ಬೇಕಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಹೇಳಿದರು