ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯು ಗರ್ಭಿಣಿ ಎಂದು ಗೊತ್ತಾದ ಕೂಡಲೇ ಘಟನೆಯನ್ನು ಮುಚ್ಚಿ ಹಾಕಲು ಆಕೆಯನ್ನು ನೇಣು ಬಿಗಿದು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬೂಕನಕೆರೆ ಗ್ರಾಮದ ಗ್ರಾಮ ಪಂಚಾಯಿತಿ ಪೌರಕಾರ್ಮಿಕರಾದ ಮಹಾದೇವಿ ಮತ್ತು ಲೇಟ್ ಮಹಾದೇವ ಅವರು ಪುತ್ರಿ ಪವಿತ್ರ(14) ಮೃತ ದುರ್ದೈವಿ. ಈಕೆ ಬೂಕನಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆಯ ಪಕ್ಕದ ಮನೆಯ ನಿವಾಸಿ ಗಾಡಿ ನಿಂಗೇಗೌಡನ ಮಗ ಪರಮೇಶ್(46) ಎಂಬಾತನೇ ಆಕೆಯ ಮೇಲೆ ಕಳೆದ ಐದಾರು ತಿಂಗಳಿನಿಂದ ಅತ್ಯಾಚಾರ ನಡೆಸಿ ಗರ್ಭಿಣೆ ಎಂದು ಗೊತ್ತಾದ ಕೂಡಲೇ ಆಕೆಯನ್ನು ನೇಣು ಬಿಗಿದು ಕೊಲೆ ಮಾಡಿದ ಆರೋಪಿಯಾಗಿದ್ದಾನೆ ಎಂದು ಆರೋಪಿಸಿ ಪೋಷಕರು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ.
ಮೃತಳ ಬಾಲಕಿಯ ತಾಯಿ ಬೂಕನಕೆರೆ ಗ್ರಾಮ ಪಂಚಾಯಿತಿಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಮೃತ ಬಾಲಕಿಯ ಪಕ್ಕದ ಮನೆಯಲ್ಲಿಯೇ ವಾಸ ವಿರುವ ಆರೋಪಿ ಪರಮೇಶ್ ಆಕೆಯ ಪೋಷಕರು ಕೆಲಸಕ್ಕೆ ಹೋದ ನಂತರ ಮನೆಗೆ ಬಂದು ಟಿವಿ ನೋಡುತ್ತಿದ್ದ ಬಾಲಕಿಯನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ಇದರಿಂದಾಗಿ ಆಕೆಯು ಗರ್ಭಿಣಿಯಾಗಿದ್ದಾಳೆ. ಈ ವಿಚಾರ ಗೊತ್ತಾದ ಕೂಡಲೇ ಆಕೆಯ ಮನೆಯಲ್ಲಿಯೇ ನೇಣು ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಮೃತ ಬಾಲಕಿಯ ಪೋಷಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಪರಮೇಶ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.