ಬೆಂಗಳೂರು: ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆ ಎಂಬುದನ್ನು ಅಂಕಿ ಅಂಶಗಳು ಸಾರಿಹೇಳುತ್ತಿವೆ. ಮುಖ್ಯವಾಗಿ ಸುಶಿಕ್ಷಿತ ಯುವಸಮುದಾಯ ಮತದಾನದಿಂದ ದೂರ ಉಳಿಯುತ್ತಿರುವುದು ಚುನಾವಣಾ ಆಯೋಗವನ್ನು ಚಿಂತೆಗೀಡು ಮಾಡಿತ್ತು. ಈ ಕಾರಣದಿಂದ ಮತದಾನದ ದಿನ ಮೇ 10 ರಂದು ಆಯೋಗದ ಸೂಚನೆಯಂತೆ ಹೆಚ್ಚಿನ ಎಲ್ಲ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಪ್ರವಾಸಿ ತಾಣಗಳಲ್ಲದೇ ಹಲವು ಜಿಲ್ಲೆಗಳಲ್ಲಿ ರೆಸಾರ್ಟ್, ಹೋಂಸ್ಟೇಗಳಲ್ಲಿಯೂ ಬುಕ್ಕಿಂಗ್ ಕ್ಯಾನ್ಸಲ್ ಮಾಡಲು ಆಯಾ ಸ್ಥಳೀಯಾಡಳಿತಕ್ಕೆ ಸೂಚಿಸಲಾಗಿದೆ. ಅಲ್ಲದೆ ಮತದಾನ ಮಾಡಿದ್ದಾರೆ ಎಂಬುದನ್ನು ಖಾತ್ರಿಪಡಿಸಿ ವಸತಿ ಇತರೆ ಚಟುವಟಿಕೆಗಳಿಗೆ ಅವಕಾಶ ನೀಡುವಂತೆ ಸೂಚಿಸಲಾಗಿದೆ.
ಜೋಗ ಜಲಪಾತಕ್ಕಿಲ್ಲ ಪ್ರವೇಶ: ಶಿವಮೊಗ್ಗದ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಮತದಾನ ದಿನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಮೇ 10 ರಂದು ಮೃಗಾಲಯಗಳನ್ನು ಮುಚ್ಚಲಾಗುವುದು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ತಿಳಿಸಿದೆ. ಅದೇ ರೀತಿ ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ಮುಚ್ಚಿ ಸಿಬ್ಬಂದಿಗೆ ಮತದಾನ ಮಾಡಲು ಅನುವು ಮಾಡಿಕೊಡಲಾಗಿದೆ. “ಮೇ 10ರಂದು ರಜಾದಿನವೆಂದು ಜನರು ಭಾವಿಸಿ ಸುತ್ತಾಡಲು ಹೋಗುವುದು, ಪ್ರವಾಸಕ್ಕೆ ಹೋಗುವುದು ಮಾಡಬಾರದು. ಆ ದಿನ ಬುಕ್ಕಿಂಗ್ ಮಾಡಿಕೊಳ್ಳದಂತೆ ನಾವು ಹೇಳುತ್ತೇವೆ. ನಮ್ಮ ಸಿಬ್ಬಂದಿಗಳು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂಬುದು ನಮ್ಮ ಉದ್ದೇಶ ಎಂದು ಕೆಎಸ್ ಟಿಡಿಸಿ ಅಧಿಕಾರಿಗಳು ತಿಳಿಸಿದ್ದಾರೆ.