ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಕಾಂಬೋಡಿಯಾ ಪ್ರವಾಸ ಕೈಗೊಂಡಿದ್ದ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದ ಕುರಿತು ಎಚ್ಡಿಕೆ ಸೋಮವಾರ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ವಿದೇಶದಲ್ಲಿಯೇ ಇದ್ದು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಲೇವಡಿ ಮಾಡಿದ್ದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯವನ್ನು ಲೂಟಿ ಮಾಡುವುದನ್ನು ಬಿಟ್ಟು ವಿದೇಶದಲ್ಲಿರುವಂತೆ ಕೆಲವರು ನನ್ನ ಕುರಿತು ಹೇಳಿಕೆ ನೀಡಿದ್ದಾರೆ.
ಆದರೆ ನನ್ನ ವಿರುದ್ಧ ಹೇಳಿಕೆ ನೀಡಿದವರು ನಾಚಿಕೆಯಿಲ್ಲದ ಲೂಟಿಯಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದಾರೆ. ಅವರಿಗೆ ಇಲ್ಲಿ ಮನಸೋ ಇಚ್ಛೆ ಇರಲು ನಮ್ಮನ್ನು ವಿದೇಶಕ್ಕೆ ಕಳುಹಿಸಲು ನೋಡುತ್ತಿದ್ದಾರೆ. ನಮಗೆ ವಿದೇಶಕ್ಕೆ ಹೋಗುವ ಯೋಗ್ಯತೆಯಿಲ್ಲವೇ, ಅವರಿಂದ ವ್ಯವಸ್ಥೆ ಮಾಡಿಸಿಕೊಂಡು ಪಾಪದ ಹಣ ತೆಗೆದುಕೊಂಡು ಹೋಗಬೇಕೆ ಎಂದು ಕೇಳಿದರು.
ಚೆಲುವರಾಯಸ್ವಾಮಿ ಕಮಿಷನ್ ತೆಗೆದುಕೊಂಡ ಆರೋಪದ ಬಗ್ಗೆ ಗವರ್ನರ್ ಗೆ ಪತ್ರ ಹೇಗೆ ಹೋಗುತ್ತದೆ, ರಾಜ್ಯಪಾಲರಿಗೆ ಬರೆದಿರುವ ಪತ್ರ ಬಗ್ಗೆ ನಾನು ಪ್ರಸ್ತಾಪನೇ ಮಾಡಿಲ್ಲ, ಆದರೂ ನನ್ನ ಹೆಸರು ತೆಗೆಯುತ್ತಾರೆ, ಅಂದರೆ ಅವರಿಗೆ ಭಯವಿದೆ ಎಂದರ್ಥವಲ್ಲವೇ, ಮೊದಲು ಪ್ರಮಾಣಿಕವಾಗಿ ನಡೆದುಕೊಳ್ಳಲು ಕಲಿತುಕೊಳ್ಳಲಿ, ಪ್ರಮಾಣಿಕವಾಗಿದ್ದರೆ ಇಂತಹ ಪರಿಸ್ಥಿತಿ ಏಕೆ ಬರುತ್ತದೆ ಎಂದು ಕೇಳಿದರು.
ಮಂತ್ರಿಗಿರಿ ಸಿಕ್ಕಿದೆ ಎಂದು ಹಗಲುದರೋಡೆ ಮಾಡಲು ನೋಡಬೇಡಿ, ಒಳ್ಳೆ ಕೆಲಸ ಮಾಡಲಿ ಎಂದು ಸಚಿವ ಚೆಲುವರಾಯಸ್ವಾಮಿಗೆ ಕುಮಾರಸ್ವಾಮಿ ಟಾಂಗ್ ನೀಡಿದರು.ಗುತ್ತಿಗೆದಾರರಿಂದ ಕಮಿಷನ್ ತೆಗೆದುಕೊಳ್ಳುವ ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತದೋ ಗೊತ್ತಿಲ್ಲ, ನಾನು ಕಳೆದ 12 ವರ್ಷಗಳಿಂದ ಪಕ್ಷ ಸಂಘಟನೆಗೆ ನನ್ನ ಸಮಯವನ್ನ ಮೀಸಲಿಟ್ಟಿದ್ದೆ. ದೇಶ ಸುತ್ತು ಕೋಶ ಓದು ಎಂದು ಗಾದೆ ಮಾತಿದೆ. ಯಾವ್ಯಾವ ದೇಶಗಳಲ್ಲಿ ಏನೇನಿದೆ, ಅಲ್ಲಿನ ಅಭಿವೃದ್ಧಿ ಕೆಲಸಗಳೇನು ಎಂದು ತಿಳಿದುಕೊಳ್ಳಲು ಕಾಂಬೋಡಿಯಾಗೆ ಅಲ್ಲಿನ ಆಹ್ವಾನ ಮೇರೆಗೆ ಸ್ನೇಹಿತರ ಜೊತೆ ಹೋಗಿದ್ದೆ. ನಾನು ಮಲೇಷಿಯಾಗೆ ಹೋಗಿದ್ದಲ್ಲ. ಅಲ್ಲಿನ ಸುಂದರ ಅತಿದೊಡ್ಡ ಹಿಂದೂ ದೇವಸ್ಥಾನ ನೋಡಲು ಹೋಗಿದ್ದೆ. ಮೂರು ದಿನ ಸುತ್ತಿದ್ರು ಆ ದೇವಸ್ಥಾನ ನೋಡಲು ಆಗುವುದಿಲ್ಲ. ಆ ಸಂಸ್ಕ್ರತಿಯನ್ನ ನೋಡಲು ಆ ದೇಶದ ಆರ್ಥಿಕ ಬೆಳವಣಿಗೆ ನೋಡಲು ಹೋಗಿದ್ದೆ ಎಂದರು.
ಕಾಂಬೋಡಿಯಾದ ದೇಶದ ಐತಿಹಾಸಿಕ ಪ್ರಸಿದ್ಧವಾದ ಆಂಗ್ಕರ್ ವಾಟ್ ದೇವಾಲಯಕ್ಕೆ ಇಂದು ಭೇಟಿ ನೀಡಲಾಯಿತು. ಜಗತ್ತಿನಲ್ಲಿಯೇ ಬೃಹತ್ ಹಿಂದೂ ದೇವಾಲಯದಲ್ಲಿ ಬಹಳ ಹೊತ್ತು ಇದ್ದೆ. ಸುಮಾರು 402 ಎಕರೆ ವಿಶಾಲ ಪ್ರದೇಶದಲ್ಲಿರುವ ಈ ದೇಗುಲ ನನ್ನನ್ನು ಮಂತ್ರಮುಗ್ಧಗೊಳಿಸಿತು.#AngkorWat pic.twitter.com/BRUD7VLsDd
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 11, 2023