ಬೆಂಗಳೂರು ಗ್ರಾಮಾಂತರ: ರಾಜ್ಯದ ನಗರಗಳ ಹೊರ ವಲಯಗಳಲ್ಲಿ ಲಾರಿ, ಟ್ರಕ್ಗಳ ನಿರ್ವಹಣೆದಾರರಿಗೆ ತಂಗುದಾಣ, ಸರಕುಗಳನ್ನು ಏರಿಳಿಸುವ ವ್ಯವಸ್ಥೆ ಒದಗಿಸುವ ಹಾಗೂ ವಾಹನ ದಟ್ಟಣೆ, ಅಪಘಾತಗಳು, ರಸ್ತೆಗಳಿಗೆ ಆಗುವ ಹಾನಿ ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಜಿಲ್ಲೆಗೊಂದು ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗುವುದು ಎಂದು ಡಿ.ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಲಿಮಿಟೆಡ್ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ತಿಳಿಸಿದರು.
ದೇವನಹಳ್ಳಿಯ, ಬೀರಸಂದ್ರದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಹಾಗೂ ಕೆ.ಐ.ಎ.ಡಿ.ಬಿ. ಅಧಿಕಾರಿಗಳ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಲಾರಿ, ಟ್ರಕ್ ಚಾಲಕರಿಗೆ, ನಿರ್ವಾಹಕರಿಗೆ ಮೂಲಭೂತ ಸೌಕರ್ಯಗಳಾದ ತಂಗುದಾಣ, ಶೌಚಾಲಯ ಕೊರತೆಯಿದೆ. ಇದನ್ನು ನೀಗಿಸಲು ರಾಜ್ಯದ 31 ಜಿಲ್ಲೆಗಳಲ್ಲೂ ಟರ್ಮಿನಲ್ ನಿರ್ಮಿಸಲಾಗುತ್ತದೆ. ಈಗಾಗಲೇ ರಾಜ್ಯದ ಮೈಸೂರು ಹಾಗೂ ಧಾರವಾಡದಲ್ಲಿ ಟರ್ಮಿನಲ್ ನಿರ್ಮಿಸಲಾಗಿದ್ದು ಟ್ರಕ್, ಲಾರಿ ನಿಲುಗಡೆಗೆ ಮತ್ತು ಇತರ ಮೂಲ ಸೌಲಭ್ಯಗಳಿಗೆ ವ್ಯವಸ್ಥೆ ಕಲ್ಲಿಸಲಾಗಿದೆ. ಬೆಂಗಳೂರಿನಲ್ಲಿ ಟ್ರಕ್ ಟರ್ಮಿನಲ್ ಕಾಮಗಾರಿ ಪೂರ್ಣಗೊಂಡಿದ್ದು, ಸರಕು ಸಾಗಾಣಿಕೆ ನಿರ್ವಹಣೆದಾರರ ಬಳಕೆಗೆ ನೀಡಲಾಗುವುದು. ಹೊಸಪೇಟೆಯಲ್ಲಿ ಟರ್ಮಿನಲ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಹಾಗೂ ಹುಬ್ಬಳ್ಳಿ, ದಾಂಡೇಲಿಯಲ್ಲಿ ಜಮೀನು ಹಂಚಿಕೆಯಾಗಿದ್ದು ಟರ್ಮಿನಲ್ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಬೆಂಗಳೂರು ಗ್ರಾಮಾಂತರದಲ್ಲಿ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಿದ್ದು ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಇದಕ್ಕಾಗಿ ಜಿಲ್ಲೆಯಲ್ಲೂ ಟರ್ಮಿನಲ್ಸ್ ಸ್ಥಾಪನೆ ಸ್ಥಳಾವಕಾಶಕ್ಕಾಗಿ ಜಿಲ್ಲಾಧಿಕಾರಿಗಳ ಮೂಲಕ ತಹಶೀಲ್ದಾರ್ಗಳಿಗೆ ಮಾಹಿತಿ ನೀಡಲಾಗಿದ್ದು ಆದಷ್ಟು ಬೇಗ ಅಗತ್ಯವಿರುವ ಸ್ಥಳಾವಕಾಶ ಒದಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಜಿಲ್ಲೆಗೊಂದು ನಿರ್ಮಾಣವಾಗುತ್ತಿರುವ ಟ್ರಕ್ ಟರ್ಮಿನಲ್ ನ್ನು 30 ರಿಂದ 40 ಎಕರೆ ಜಾಗದಲ್ಲಿ 2 ಸಾವಿರ ವಾಹನ ನಿರ್ಮಾಣ ಸಾಮರ್ಥ್ಯದಲ್ಲಿ ನಿರ್ಮಿಸಲಾಗುವುದು. ಇದರಲ್ಲಿ ಶೌಚಾಲಯ, ವ್ಯಾಯಾಮ, ಶಾಲೆ, ಎಟಿಎಂ, ಪೊಲೀಸ್ ಸ್ಟೇಷನ್, ಬ್ಯಾಂಕ್, ಶಾಪಿಂಗ್ ಮಾಲ್ ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು. ಇದು ಟ್ರಕ್ , ಲಾರಿ ಚಾಲಕರಿಗೆ ನೆರವಾಗುವ ಜತೆಗೆ ಉದ್ಯೋಗ ಅವಕಾಶವನ್ನು ಸೃಷ್ಟಿಸಿ ಮಿನಿಟೌನ್ ಶಿಪ್ನಂತೆ ನಿರ್ಮಾಣ ಮಾಡಲಾಗುವುದು ಎಂದರು.
ರಾಜ್ಯದಾದ್ಯಂತ ಲಾರಿ, ಟ್ರಕ್ ನಿರ್ವಹಣೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಯಲ್ಲೂ ಟ್ರಕ್ ಟರ್ಮಿನಲ್ಸ್ ನಿರ್ಮಿಸಲು, ಸರ್ಕಾರಿ ಜಮೀನು ಗುರುತಿಸಿ ಸಂಸ್ಥೆಗೆ ಹಂಚಿಕೆ ಮಾಡಲು ಆಯಾ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಭೂಲಭ್ಯತೆಯ ಹಾಗೂ ಅನುದಾನ ಲಭ್ಯತೆಯ ಆಧಾರದ ಮೇಲೆ ಯೋಜನೆಗಳನ್ನು ಕೈಗೊಳ್ಳಲಾಗುವಿದು. ಪಿಪಿಟಿ ಮಾದರಿಯಲ್ಲೂ ಆರಂಭಿಸುವ ಚಿಂತನೆಯಿದೆ. ಅದರಂತೆ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲೂ ಸ್ಥಳಾವಕಾಶ ಗುರುತಿಸಲು ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಜಿಲ್ಲೆಯಲ್ಲೂ ಶೀಘ್ರವಾಗಿ ಟರ್ಮಿನಲ್ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.
ಟ್ರಕ್ ಟರ್ಮಿನಲ್ಸ್ನಂತೆ ರಸ್ತೆಬದಿಗಳಲ್ಲಿ ಟ್ರಕ್ ನಿರ್ವಹಣೆಗಾರರಿಗೆ 10 ರಿಂದ 15 ನಿಮಿಷ ವಿಶ್ರಾಂತಿ ಪಡೆಯಲು ಹಾಗೂ ವಸ್ತುಗಳ ಖರೀದಿಸಲು ಅನುಕೂಲವಾಗುವಂತೆ 2 ಎಕರೆಯಲ್ಲಿ ಶಾಪಿಂಗ್ ಸೆಂಟರ್ಗಳ ನಿರ್ಮಾಣ ಮಾಡಲಾಗುವುದು. ರಾಜ್ಯದಲ್ಲಿ 20 ಕಡೆಗಳಲ್ಲಿ ಇದನ್ನು ಸ್ಥಾಪಿಸುವ ಚಿಂತನೆಯಿದ್ದು, ಮೊದಲನೇ ಹಂತದಲ್ಲಿ 10 ಕಡೆಯಲ್ಲಾದರೂ ಶಾಪಿಂಗ್ ಸೆಂಟರ್ಗಳು ಆರಂಭವಾಗಲಿದೆ ಎಂದರು.
ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ, ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ, ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ತೇಜಸ್ಕುಮಾರ್ ಸೇರಿದಂತೆ ತಹಶಿಲ್ದಾರ್ಗಳು, ಕೆ.ಐ.ಎ.ಡಿ.ಬಿ. ಅಧಿಕಾರಿಗಳು ಉಪಸ್ಥಿತರಿದ್ದರು.