ನೆಲಮಂಗಲ: ಮದ್ವೆಯಾಗಿ ಇಬ್ಬರು ಮಕ್ಕಳಿದ್ದರೂ ಈತನಿಗೆ ನಾದಿನಿ ಮೇಲಿತ್ತು ಮೋಹ. ಇದಕ್ಕೆ ಅಡ್ಡಿಯಾದ ಪತ್ನಿಯನ್ನೇ ಕೊಂದ ಗಂಡ ಸುಳ್ಳು ಕಥೆ ಕಟ್ಟಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಇಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಗ್ರಾಮದ ಭುವನೇಶ್ವರಿ ಬಡಾವಣೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆಲೂರು ಗ್ರಾಮದ ಶ್ವೇತಾ (30) ಮೃತ ದುರ್ದೈವಿ. ಹಿರಿಯೂರು ತಾಲೂಕಿನ ಕುರುಬರಹಳ್ಳಿ ಚೌಡೇಶ್ (35) ಆರೋಪಿ. 9 ವರ್ಷಗಳ ಹಿಂದೆ ಶ್ವೇತಾ ಮತ್ತು ಚೌಡೇಶ್ಗೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಉದ್ಯೋಗ ಅರಸಿ ನೆಲಮಂಗಲಕ್ಕೆ ಬಂದಿದ್ದ ಚೌಡೇಶ್ ದಂಪತಿ ತೊಣಚಿನಕುಪ್ಪೆ ಗ್ರಾಮದ ಬಾಡಿಗೆ ಮನೆಯಲ್ಲಿದ್ದರು. ತೊಣಚಿನಕುಪ್ಪೆ ಬಳಿಯ ಬಾರ್ನಲ್ಲಿ ಕ್ಯಾಶಿಯರ್ ಆಗಿದ್ದ ಚೌಡೇಶ್, 3 ವರ್ಷದ ಹಿಂದೆ ನಿವೇಶನ ಖರೀದಿಸಿ, ಮನೆ ಕಟ್ಟಿಕೊಂಡು ವಾಸವಿದ್ದ.
ಲೋ ಬಿಪಿಯಿಂದ ಸತ್ತಿದ್ದಾಗಿ ಕತೆ: ಇದ್ದಕ್ಕಿದ್ದಂತೆ ಮಂಗಳವಾರ ರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶ್ವೇತಾಳನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದ ಚೌಡೇಶ್, ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದಿದ್ದಾಗಿ ಹೇಳಿದ್ದ. ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದರಿಂದ ಶವವನ್ನು ಮನೆಗೆ ಕೊಂಡೊಯ್ದ ಬಳಿಕ ಸಹೋದರ ಜಗನ್ನಾಥ್ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಮಾಹಿತಿ ನೀಡಿದ್ದ. ಬುಧವಾರ ನಸುಕಿನ 3 ಗಂಟೆಯಲ್ಲಿ ಆಲೂರಿಗೆ ತೆರಳಿದ ಜಗನ್ನಾಥ್, ಶ್ವೇತಾಳ ಪಾಲಕರಿಗೆ ಮಾಹಿತಿ ನೀಡಿದ್ದ. ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ನೆಲಮಂಗಲಕ್ಕೆ ಬಂದಾಗ ಆಕೆ ಸತ್ತಿರುವ ವಿಷಯ ಗೊತ್ತಾಗಿದೆ. ಶವ ಪರಿಶೀಲಿಸಿದಾಗ ಥಳಿಸಿದ್ದಲ್ಲದೆ, ಕುತ್ತಿಗೆ ಬಿಗಿದಿರುವ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಶ್ವೇತಾ ಪಾಲಕರು, ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಚೌಡೇಶ್ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಆತ ತಾನು ಶ್ವೇತಾ ಸಹೋದರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದೆ. ಈ ವಿಷಯ ಶ್ವೇತಾಗೆ ಗೊತ್ತಾಗಿ ಗಲಾಟೆ ಮಾಡುತ್ತಿದ್ದಳು. ಇದೇ ವಿಚಾರವಾಗಿ ಮಂಗಳವಾರ ರಾತ್ರಿ ಕೂಡ ಜಗಳವಾಗಿತ್ತು. ಆಗ ಕೋಪದಲ್ಲಿ ಶ್ವೇತಾಳ ಹಲ್ಲೆ ಮಾಡಿದೆ. ಬಳಿಕ ಆಕೆಯ ಕುತ್ತಿಗೆ ಬಿಗಿದು ಕೊಂದುಬಿಟ್ಟೆ ಎಂದು ಬಾಯ್ಬಿಟ್ಟಿದ್ದಾನೆ.
ವರದಕ್ಷಿಣೆ ಕಿರುಕುಳ ಆರೋಪ: ಚೌಡೇಶ್ ನಾಲ್ಕೈದು ವರ್ಷಗಳಿಂದ ಕೌಟುಂಬಿಕ ವಿಷಯವಾಗಿ ಶ್ವೇತಾಳೊಂದಿಗೆ ಜಗಳವಾಡುತ್ತಿದ್ದ. ಜಗಳವಾದಾಗಲೆಲ್ಲ ಮನೆಯ ಹಿರಿಯರು ಬಂದು ಸಂಧಾನ ಮಾಡುತ್ತಿದ್ದರು. 2 ವರ್ಷಗಳ ಹಿಂದೆ ಮನೆ ನಿರ್ಮಿಸುವ ಸಲುವಾಗಿ ಶ್ವೇತಾ ಪಾಲಕರು ಚೌಡೇಶ್ಗೆ 5 ಲಕ್ಷ ರೂ. ಕೊಟ್ಟಿದ್ದರು. ಹೆಚ್ಚಿನ ವರದಕ್ಷಿಣೆಗೆ ಒತ್ತಾಯಿಸಿ ಶ್ವೇತಾಗೆ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಮಗಳು ತಮ್ಮ ಬಳಿ ದೂರಿಕೊಂಡಿದ್ದಳು. ಇದೇ ವಿಷಯ ಮುಂದಿಟ್ಟುಕೊಂಡು ಚೌಡೇಶ್ ಆಕೆಯನ್ನು ಕೊಲೆ ಮಾಡಿರಬಹುದು ಎಂದು ಶ್ವೇತಾಳ ತಾಯಿ ಭಾಗ್ಯಮ್ಮ ಆರೋಪಿಸಿದ್ದಾರೆ.