ಬೆಂಗಳೂರು: ಖ್ಯಾತ ಉದ್ಯಮಿ ಹಾಗೂ ನಗರದ ಜ್ಯೋತಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ದಿವಂಗತ ಡಾ. ಬಿ.ಎನ್.ವಿ. ಸುಬ್ರಹ್ಮಣ್ಯಂ ಅವರು ಬ್ರಾಹ್ಮಣ ಮಹಾಸಭೆಗೆ ಹಾಗೂ ಸಮಾಜಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾದುದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಸ್ಮರಿಸಿದರು.
ಪದ್ಮನಾಭ ನಗರದಲ್ಲಿರುವ ಬ್ರಾಹ್ಮಣ ಮಹಾಸಭಾದ ಮಹಿಳಾ ವಸತಿ ನಿಲಯ ವಿದ್ಯಾ ವಾಸಿನಿ ಆವರಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಡಾ. ಬಿ.ಎನ್.ವಿ.ಸುಬ್ರಹ್ಮಣ್ಯ ಅವರ ಪುತ್ಥಳಿಯನ್ನುಅನಾವರಣ ಮಾಡಿ ಮಾತನಾಡಿದ ಅವರು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಸಮುದಾಯದ ಸಂಘಟನೆಗೆ ಹಾಗೂ ಏಳಿಗೆಗೆ ಡಾ.ಬಿಎನ್ ವಿ ಯವರ ಪರಿಶ್ರಮ ಹಾಗೂ ತ್ಯಾಗ ದೊಡ್ಡದು. ಅವರ ತ್ಯಾಗ ಹಾಗೂ ಪರಿಶ್ರಮದ ಫಲವಾಗಿ ಮಹಾಸಭಾ ಗಟ್ಟಿಯಾಗಿ ನೆಲೆಯೂರಲು ಕಾರಣವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಡಾ. ಬಿ.ಎನ್.ವಿ.ಸುಬ್ರಹ್ಮಣ್ಯ ಅವರ ಸ್ಮರಣಾರ್ಥ ಪ್ರತಿ ವರ್ಷ ಮಹಾಸಭಾ ವತಿಯಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದೂ ತಿಳಿಸಿದರು.
ವಿದ್ಯಾ ವಾಸನಿ ಮಹಿಳಾ ವಸತಿ ಗೃಹದಲ್ಲಿ ಸದ್ಯ 176 ಮಂದಿ ಮಕ್ಕಳಿದ್ದು, ಪ್ರವೇಶ ಬಯಸಿರುವ ಇನ್ನೂ 20 ಕ್ಕೂ ಹೆಚ್ಚು ಮಂದಿ ನಿರೀಕ್ಷಣಾ ಪಟ್ಟಿಯಲ್ಲಿದ್ದಾರೆ. ಹೊರ ಊರುಗಳಿಂದ ಶಿಕ್ಷಣ, ಉದ್ಯೋಗಕ್ಕಾಗಿ ಬರುವ ಸಮಾಜದ ಹೆಣ್ಣುಮಕ್ಕಳಿತೆ ಈ ವಸತಿ ನಿಲಯ ಆಸರೆಯಾಗಿದ್ದು ಸುಸಜ್ಜಿತವಾಗಿದೆ ಎಂದೂ ವಿವರಿಸಿದರು.
ಹೋರಾಟವೆ ಮದ್ದಲ್ಲ:
ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮುದಾಯದ ಕುರಿತಂತೆ ಕೆಲವು ರಾಜಕೀಯ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ವಿರೋಧಿಸಿ ತೀವ್ರ ಸ್ವರೂಪದ ಪ್ರತಿಭಟನೆ ಮಾಡಬೇಕೆಂಬ ಒತ್ತಡ ಸಮುದಾಯದ ಜನರಿಂದ, ಬ್ರಾಹ್ಮಣ ಸಂಘಟನೆಗಳಿಂದ ಬರುತ್ತಿದೆ. ಆದರೆ ಎಲ್ಲದಕ್ಕೂ ಪ್ರತಿಭಟನೆ ಹೋರಾಟವೆ ಮದ್ದಲ್ಲ. ನಮ್ಮ ಕುರಿತಾಗಿ ಅವರಿಗಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅವರಿಗೆ ಶಾಂತಯುತವಾಗೇ ಮನವರಿಕೆ ಮಾಡಿಕೊಡೋಣ. ಬ್ರಾಹ್ಮಣ ಮಹಾಸಭೆ ಯಾವುದೇ ರಾಜಕೀಯ ಪಕ್ಷಗಳ ಮುಖ ವಾಣಿಯಲ್ಲ. ಸಮಾಜದ ಅಭ್ಯುದಯಕ್ಕೆ ಮೀಸಲಾದ ಸಂಘಟನೆಯಾಗಿದೆ. ಎಲ್ಲ ಸಮುದಾಯದವರನ್ನೂ, ಎಲ್ಲ ರಾಜಕೀಯ ಪಕ್ಷಗಳನ್ನು ಒಟ್ಟಿಗೇ ತೆಗೆದುಕೊಂಡು ಹೋಗುವ ಮೂಲಕ ನಾವು ಸಮಾಜದಲ್ಲಿ ಸೌಹಾರ್ಧ ವಾತಾವರಣ ಬೆಳೆಯಲು ಕಾರಣವಾಗಬೇಕು ಎಂದೂ ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಮಹಾಸಭೆಯ ಮುಖಂಡರಾದ ಹಿರಿಯಣ್ಣ ಸ್ವಾಮಿ, ಡಾ.ಭಾನು ಪ್ರಕಾಶ್ ಶರ್ಮ, ಪ್ರೊಫೆಸರ್ ಎಚ್.ಎಸ್. ಲಕ್ಷ್ಮೀನಾರಾಯಣ ಭಟ್ ಮಾತನಾಡಿದರು. ಧಾರ್ಮಿಕ ಪ್ರವರ ಡಾ. ಬಿ.ಎನ್.ವಿ. ಸುಬ್ರಹ್ಮಣ್ಯಂ ಅವರ ಪತ್ನಿ ಶ್ರೀಮತಿ ಸೀತಮ್ಮ, ಸೋದರ ಸಂಬಂಧಿ ನರಸಿಂಹನ್, ಮಾಜಿ ಮೇಯರ್ ಕಟ್ಟೆ ಸತ್ಯ ನಾರಾಯಣ, ಮಹಾಸಭೆಯ ಸಂಸ್ಥಾಪಕರಲ್ಲಿ ಒಬ್ಬರಾದ ಡಿ.ಎಸ್.ಹೊನ್ನಪ್ಪ, ವಿದ್ಯಾ ವಾಸಿನಿ ಮಹಿಳಾ ವಸತಿ ನಿಲಯದ ವ್ಯವಸ್ಥಾಪಕಿ ಸಮುದ್ಯತಾ, ಶ್ರೀಮತಿ ಸಾವಿತ್ರಿ ರಮೇಶ್, ನರಸಿಂಹ ಮೂರ್ತಿ,ಹಾಗೂ ಮಹಾಸಭಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಹಾಸಭೆಯ ಸಹ ಕಾರ್ಯದರ್ಶಿ ಕಾರ್ತೀಕ್ ಬಾಪಟ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಶ್ರೀಧರ ಮೂರ್ತಿ ಸ್ವಾಗತಿಸಿದರು.