ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಹಂತದಲ್ಲಿರುವ ಹಾಗೂ ಈಗಾಗಲೇ ನಿರ್ಮಿಸಿ ಹಂಚಿಕೆ ಮಾಡಿರುವ ಬಹುಮಹಡಿ ವಸತಿ ಯೋಜನೆಗಳಿಗೆ ಆಯುಕ್ತರಾದ ಜಿ ಕುಮಾರ್ ನಾಯಕ್ ಅವರು ಧಿಡೀರ್ ಬೇಟಿ ನೀಡಿ ಖುದ್ದಾಗಿ ಪರಿವೀಕ್ಷಣೆ ನಡೆಸಿ ಸ್ಥಳದಲ್ಲಿದ್ದ ನಿವಾಸಿಗಳನ್ನು ಮಾತನಾಡಿಸಿ ಕುಂದು ಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಿ ಮಾಹಿತಿ ಪಡೆದರು.
ಬೆಂಗಳೂರು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವ ಸಂಸ್ಥೆಯಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಾರ್ವಜನಿಕರಿಗಾಗಿ ನಿವೇಶನಗಳ ಅಭಿವೃದ್ಧಿಯ ಜೊತೆಯಲ್ಲಿ ಎಲ್ಲಾ ವರ್ಗದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ವಸತಿ ನೀಡುವ ಉದ್ದೇಶದಿಂದ ಬಹುಮಹಡಿ ವಸತಿ ಯೋಜನೆಗಳನ್ನು ನಿರ್ಮಾಣ ಮಾಡುತ್ತಿದೆ. ಸಾರ್ವಜನಿಕರಿಂದ ಅನೇಕ ದೂರುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಅವರು ಇಂದು ಸಂಬಂಧಿಸಿದ ಅಧಿಕಾರಗಳ ತಂಡದೊಂದಿಗೆ ನಗರದ ಕೆ.ಆರ್.ಪುರಂ ವ್ಯಾಪ್ತಿಯ ದೊಡ್ಡಬನಹಳ್ಳಿ ಹಾಗೂ ಕೋಣದಾಸಪುರದಲ್ಲಿ ಬಹುಮಹಡಿ ವಸತಿ ಯೋಜನೆಗಳಿಗೆ ಧಿಡೀರ್ ಭೇಟಿ ನೀಡಿ ಪರಿವೀಕ್ಷಿಸಿದರು.
ದೊಡ್ಡಬನಹಳ್ಳಿ ಬಹುಮಹಡಿ ವಸತಿ ಯೋಜನೆ ಹಂತ 1 ಮತ್ತು 2 ನೇ ಯೋಜನೆಯಲ್ಲಿ ಮನೆಗಳನ್ನು ಈಗಾಗಲೇ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗಿದೆ, ಅದರಲ್ಲಿ ಸಹ ಕೆಲ ಕಾರ್ಯಗಳು ಬಾಕಿ ಇದ್ದು ಅವುಗಳನ್ನು ಪೂರ್ಣಗೊಳಿಸುವಂತೆ ಮನವಿ ಮಾಡಿದ ಸಾರ್ವಜನಿಕರಿಗೆ ಸ್ಪಂದಿಸಿದ ಆಯುಕ್ತರು ಸ್ಥಳದಲ್ಲಿದ್ದ ಸಂಬಂಧಿಸಿದ ಅಧಿಕಾರಿಗಳಿಗೆ ತುರ್ತಾಗಿ ಬಾಕಿ ಇರುವ ಕಾರ್ಯಗಳನ್ನು ಪೂರ್ಣ ಮಾಡಲು ಸೂಚಿಸಿದರು ಹಾಗೂ ಸ್ಥಳಿಯ ನಿವಾಸಿಗಳಿಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಆಧ್ಯತೆ ನೀಡುವಂತೆ ಮನವಿ ಮಾಡಿದರು.
ನಿರ್ಮಾಣ ಪೂರ್ಣಗೊಂಡು ಹಂಚಿಕೆಗೆ ಸಿದ್ಧವಾಗಿರುವ 2-ಬಿ.ಎಚ್.ಕೆ. ಯ ಕೋಣದಾಸಪುರ ಹಂತ-2 ರ ಯೋಜನೆಯನ್ನು ಪೂರ್ಣವಾಗಿ ಪರಿವೀಕ್ಷಿಸಿದರು ಹಾಗೂ ಸ್ಥಳದಲ್ಲಿ ಹಾಜರಿದ್ದ ಅಭಿಯಂತರ ಸದಸ್ಯರಾದ ಹೆಚ್.ಆರ್.ಶಾಂತರಾಜಣ್ಣ ರವರಿಂದ ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ಪಡೆದರು.
ನಂತರ ಪ್ರತಿಕ್ರಿಯಿಸಿದ ಆಯುಕ್ತರು, ಬಿಡಿಎನಿಂದ ಸಾರ್ವಜನಿಕರಿಗಾಗಿ ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸಬೇಕೆಂದು ಹಾಗೂ ನಮ್ಮ ಸಂಸ್ಥೆ ಕಟ್ಟಿರುವ ಮನೆಗಳಲ್ಲಿ ವಾಸಿಸುವವರಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಯೋಜನೆಯಲ್ಲಿಯೇ ಒದಗಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಭಿಯಂತರ ಸದಸ್ಯರಾದ ಶಾಂತರಾಜಣ್ಣ ಸೇರಿದಂತೆ ಸಂಬಂಧಿಸಿದ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.