ಬೆಂಗಳೂರು: ಬಾಂಬೆ ಮಿಠಾಯಿ ಮತ್ತು ಗೋಬಿ ಮಂಚೂರಿಯನ್ನು ಕ್ಯಾನ್ಸರ್ಕಾರಕ ಅಂಶಗಳು ಪತ್ತೆಯಾಗಿರುವುದು ಗೋಬಿ ಪ್ರಿಯರನ್ನ ಆತಂಕಕ್ಕೆ ತಳ್ಳಿದೆ. ಈ ವಿಚಾರ ಸರ್ಕಾರದ ಗಮನಕ್ಕೂ ಬಂದಿದ್ದು ದೊಡ್ಡಮಟ್ಟದಲ್ಲಿ ಚರ್ಚೆ ಆಗುತ್ತಿದೆ.
ಅಂತೆಯೇ ರಾಜ್ಯದಲ್ಲಿ ಗೋಬಿ ನಿಷೇಧ ಆಗಲಿದೆ ಎಂಬ ಸುದ್ದಿ ಇದೆ. ಈ ಸಂಬಂಧ ಇಂದು ಮಹತ್ವದ ಸಭೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಸಭೆ ಬಳಿಕ ಮಾಧ್ಯಮಗೋಷ್ಠಿ ನಡೆಸಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳನ್ನ ತಿಳಿಸಿದರು.
ರಾಜ್ಯದಲ್ಲಿ ಅಪಾಯಕಾರಿಯಾದ ಕೃತಕ ಬಣ್ಣ ಹಾಕಿದ ಕಾಟನ್ ಕ್ಯಾಂಡಿ ಬ್ಯಾನ್ ಮಾಡಲಾಗಿದೆ. ಇನ್ನು ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣ ಬಳಸಿದರೇ ಆಹಾರ ಸುರಕ್ಷಿತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 59ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವಂತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಗೋಬಿ ಮಂಚೂರಿಯ 171 ಮಾದರಿಗಳ ಸಂಗ್ರಹ ಮಾಡಲಾಗಿತ್ತು. ಈ ಪೈಕಿ 107 ಮಾದರಿಯಲ್ಲಿ ಕೃತಕ ಬಣ್ಣಗಳು ಕಂಡು ಬಂದಿವೆ. ಟಾರ್ ಟ್ರಾಸೈಲ್, ಸನ್ ಸೆಟ್ ಯೆಲ್ಲೋ ಹಾಗೂ ಕಾರ್ಮೋಸಿನ್ ಪತ್ತೆಯಾಗಿದೆ. ಕಾಟನ್ ಕ್ಯಾಂಡಿಯ 25 ಮಾದರಿಯ ಸಂಗ್ರಹ ಮಾಡಲಾಗಿತ್ತು. 15 ಮಾದರಿಯಲ್ಲಿ ಕೃತಕ ಬಣ್ಣಗಳು ಕಂಡು ಬಂದಿವೆ. ರೋಡ್ ಮೈನ್-ಬಿ ಅಂಶ ಪತ್ತೆ ಆಗಿರುವುದು ಬೆಳಕಿಗೆ ಬಂದಿದೆ ಎಂದರು.
ಇನ್ಮುಂದೆ ಒಂದು ವೇಳೆ ಕೃತಕ ಕಲರ್ ಬಳಸಿ ಗೋಬಿ ಮಂಚೂರಿ ಮಾರಾಟ ಮಾಡಿದ್ರೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತೆ. ನಿಯಮ ಉಲ್ಲಂಘಿಸಿದವರ ವಿರುದ್ಧ 7 ವರ್ಷಕ್ಕಿಂತ ಅಧಿಕ ಜೈಲು ಶಿಕ್ಷೆಗೆ ಒಳಪಡಬಹುದು. ತಪ್ಪಿತಸ್ಥರ ವಿರುದ್ಧ ಜೀವಾವಧಿ ಶಿಕ್ಷೆಗೂ ಕಾನೂನಿನಲ್ಲಿ ಅವಕಾಶವಿದೆ ಎಂದಿದ್ದಾರೆ.