ಬೆಂಗಳೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ, ಯುವ ದಸರಾ ಅ.18ರಿಂದ 21ರವರೆಗೆ ನಡೆಯಲಿದ್ದು, ಅ.18ರಂದು ಸಂಜೆ ನಟ ಶಿವರಾಜ್ಕುಮಾರ್ ಯುವ ದಸರಾಗೆ ಚಾಲನೆ ನೀಡಲಿದ್ದಾರೆ.
ಅಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು. ನಂತರ ಸ್ಯಾಂಡಲ್ವುಡ್ ನೈಟ್ ಇರಲಿದ್ದು, ನಟ ಸಾಧುಕೋಕಿಲಾ ತಂಡದಿಂದ ಕಾರ್ಯಕ್ರಮ ನಡೆಯಲಿದೆ. 19ರಂದು ಗಾಯಕ ಸಂಚಿತ್ ಹೆಗ್ಡೆ, ಶಿಲ್ಪಾರಾವ್, 20ರಂದು ಆಲ್ ಓಕೆ ತಂಡದಿಂದ ಕಾರ್ಯಕ್ರಮವಿರಲಿದ್ದು, ನಂತರ ಫ್ಯಾಶನ್ ಶೋ ನಡೆಯಲಿದೆ. ಬಳಿಕ ಸಲಿಂ ಸುಲೇಮಾನ್ ಕಾರ್ಯಕ್ರಮ ನಡೆಸಿಕೊಡುವರು. ಕಡೆಯ ದಿನವಾದ 21ರಂದು ಮೊದಲಿಗೆ ಮೋಹನ ಸಿಸ್ಟರ್ಸ್ ತಂಡದಿಂದ ಕಾರ್ಯಕ್ರಮವಿರಲಿದ್ದು, ಬಳಿಕ ಗಾಯಕ ಬಿನ್ನಿ ದಯಾಳ್ ಅವರ ಕಾರ್ಯಕ್ರಮದೊಂದಿಗೆ ಯುವ ದಸರಾಗೆ ತೆರೆ ಬೀಳಲಿದೆ. ಪಾಸ್ ವಿತರಣೆ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕೇಂದ್ರ ರಕ್ಷಣಾ ಇಲಾಖೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ವೈಮಾನಿಕ ಪ್ರದರ್ಶನವನ್ನು ಅ.23ರಂದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದೆ. 22ರಂದು ರಿಹರ್ಸಲ್ ನಡೆಯಲಿದ್ದು, 23ರಂದು ಸಂಜೆ 4ರಿಂದ 5ರವರೆಗೆ ಮುಖ್ಯ ಪ್ರದರ್ಶನ ನಡೆಯಲಿದೆ. ಅಂದೇ ಪಂಜಿನ ಕವಾಯತು ರಿಹರ್ಸನ್ ನಡೆಯುವುದರಿಂದ ಎರಡೂ ಕಾರ್ಯಕ್ರಮಕ್ಕೆ ಒಂದೇ ಪಾಸ್ ನೀಡಬೇಕೆ ಬೇಡವೇ ಎಂಬ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಇದರ ಜತೆಗೆ ಪ್ಯಾರಾ ಮೋಟರಿಂಗ್, ಹೆಲಿ ರೈಡ್ಗೂ ಅವಕಾಶ ನೀಡಲಾಗಿದೆ.
ಈ ಬಾರಿಯ ಜಂಬೂ ಸವಾರಿಯನ್ನು ಆಕರ್ಷಕವಾಗಿಸಲು ನಿರ್ಧರಿಸಿದ್ದು, ಚಿನ್ನದ ಅಂಬಾರಿ ಮುಂಭಾಗ 200 ಮಂದಿ ದರ್ಬಾರ್ ಸಮವಸ್ತ್ರ ಧರಿಸಿ ಸಾಗಲಿದ್ದಾರೆ. ಇದಕ್ಕಾಗಿ ಅರಮನೆ ಮಂಡಳಿಯಿಂದ ವಿಶೇಷ ಸಮವಸ್ತ್ರ ಸಿದ್ಧಪಡಿಸಲು ಟೆಂಡರ್ ನೀಡಲಾಗಿದೆ. ಎಲ್ಲಾ ಜಿಲ್ಲೆಗಳಿಂದಲೂ ಸ್ತಬ್ಧಚಿತ್ರಗಳು ಭಾಗವಹಿಸಲಿದ್ದು, ಕೆಲ ದಿನಗಳಲ್ಲಿ ಎಷ್ಟು ಸ್ತಬ್ಧಚಿತ್ರಗಳು ಪಾಲ್ಗೊಳ್ಳುತ್ತಿವೆ 300ಕ್ಕೂ ಹೆಚ್ಚು ಕಲಾತಂಡಗಳು ಅರ್ಜಿ ಸಲ್ಲಿಸಿದ್ದಾರೆ.