ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್ ಗಳ ಸಂಖ್ಯೆಯನ್ನು ವಿಸ್ತರಿಸಲು ರಾಜ್ಯಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್ ಆರಂಭಿಸಲು ಸಚಿವ ಸಂಪುಟ ನಿರ್ಧರಿಸಿದ್ದು, ಅಲ್ಲದೆ ಊಟದ ಮೆನು ಬದಲಾವಣೆಗೆ ತೀರ್ಮಾನಿಸಿದೆ.
ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇನ್ನು ಮುಂದೆ ಕ್ಯಾಂಟೀನ್ಗಳಲ್ಲಿ ಸ್ಥಳೀಯ ತಿಂಡಿ, ತಿನಿಸು ಒಳಗೊಂಡ ಪುಷ್ಕಳ ಭೋಜನ ಸಿಗಲಿದೆ. ತಿಂಡಿಗೆ 5 ರೂ., ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಲಾ 10 ರೂ.ನಂತೆ ದಿನದ ಊಟಕ್ಕೆ ಒಟ್ಟು 25 ರೂ.ಗಳೇ ಮುಂದುವರಿಯಲಿದೆ.
ಆದರೆ, ಮೆನು ಬದಲಾವಣೆ ತೀರ್ಮಾನದಂತೆ ಗುತ್ತಿಗೆದಾರರಿಗೆ ತಲಾ 5 ರೂ. ಹೆಚ್ಚುವರಿ ಪಾವತಿಸಲು ಸರಕಾರ ನಿರ್ಧರಿಸಿದೆ. ಅಂದರೆ, ಪ್ರತಿ ದಿನದ ತಲಾ ಊಟದ ವೆಚ್ಚ ಸದ್ಯ 57 ರೂ.ಗಳಿಂದ 62 ರೂ.ಗಳಿಗೆ ಏರಿಕೆಯಾಗುತ್ತಿದೆ. ಜನರು ದಿನದ ಊಟಕ್ಕೆ 25 ರೂ. ಮಾತ್ರವೇ ಪಾವತಿಸಲಿದ್ದು, ಉಳಿದ 37 ರೂ.ಗಳನ್ನು ಸರಕಾರ ಭರಿಸಲಿದೆ.
ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಮಹಾನಗರ ಪಾಲಿಕೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಹೊಸದಾಗಿ 188 ಇಂದಿರಾ ಕ್ಯಾಂಟೀನ್ ತೆರೆಯಲೂ ಸಂಪುಟ ನಿರ್ಧರಿಸಿತು. ”ಹಾಲಿ 197 ಇಂದಿರಾ ಕ್ಯಾಂಟೀನ್ಗಳನ್ನು ದುರಸ್ತಿ ಮಾಡಿ ಗುಣಮಟ್ಟದ ಊಟ, ತಿಂಡಿ ಪೂರೈಕೆಗೆ ನಿರ್ಧಾರದ ಜತೆಗೆ, ನಗರ ಪ್ರದೇಶಗಳಲ್ಲಿಹೆಚ್ಚುವರಿಯಾಗಿ 188 ಹೊಸ ಕ್ಯಾಂಟೀನ್ ಆರಂಭಿಸಲು ನಿರ್ಧರಿಸಲಾಯಿತು,” ಎಂದು ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್.ಕೆ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.