ಕೋಲಾರ: ಗುರುವಾರ ರಾತ್ರಿ ಜಿಲ್ಲೆಯ ಮಾರ್ಗವಾಗಿ ತಮಿಳುನಾಡಿನಿಂದ ಬೆಂಗಳೂರಿಗೆ ಮೊಬೈಲ್ ಸಾಗಿಸುತ್ತಿದ್ದ ಕಂಟೈನರ್ ಅಡ್ಡಗಟ್ಟಿದ ದರೋಡೆಕೋರರು ₹ 6.39 ಕೋಟಿ ಮೌಲ್ಯದ ಮೊಬೈಲ್ಗಳನ್ನು ದೋಚಿದ್ದಾರೆ.
ಬೆಂಗಳೂರಿನ ಶ್ರೀಜಿ ಟ್ರಾನ್ಸ್ ಪೋರ್ಟ್ ಏಜೆನ್ಸಿಗೆ ಸೇರಿದ ಕಂಟೈನರ್ನಲ್ಲಿ ಚೆನ್ನೈನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಗೆ ಎಂ.ಐ ಕಂಪನಿಯ ಮೊಬೈಲ್ಗಳನ್ನು ಸಾಗಿಸಲಾಗುತ್ತಿತ್ತು. ಕಾರಿನಲ್ಲಿ ಹಿಂಬಾಲಿಸಿ ಬಂದ ಆರು ಮಂದಿ ದರೋಡೆಕೋರರು ಮುಳಬಾಗಿಲು ತಾಲ್ಲೂಕಿನ ದೇವರಾಯಸಮುದ್ರ ಬಳಿ ಕಂಟೈನರ್ ಅಡ್ಡಗಟ್ಟಿ ಚಾಲಕ ಸುರೇಶ್ ಜತೆ ಜಗಳವಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದರೋಡೆಕೋರರು ಸುರೇಶ್ ಮೇಲೆ ಹಲ್ಲೆ ನಡೆಸಿ ಸಮೀಪದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಬಾಯಿಗೆ ಬಟ್ಟೆ ತುರುಕಿ, ಕೈ ಕಾಲುಗಳನ್ನು ಕಟ್ಟಿದ್ದಾರೆ. ಬಳಿಕ ಕಂಟೈನರ್ನಲ್ಲಿದ್ದ ಮೊಬೈಲ್ಗಳನ್ನು ಮತ್ತೊಂದು ಲಾರಿಗೆ ತುಂಬಿಸಿಕೊಂಡಿದ್ದಾರೆ. ನಂತರ ಖಾಲಿ ಕಂಟೈನರ್ ಅನ್ನು ಕೋಲಾರ ತಾಲ್ಲೂಕಿನ ನೆರ್ನಹಳ್ಳಿ ಬಳಿ ನಿಲ್ಲಿಸಿ ಮೊಬೈಲ್ ಸರಕಿನೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.