ಬೆಂಗಳೂರು: ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವ ಸೌಹಾರ್ದ ಸಹಕಾರ ಸಂಸ್ಥೆಗಳ ತಿದ್ದುಪಡಿ ಕಾಯ್ದೆಗೆ ವಿಧಾನಪರಿಷತ್ ನಲ್ಲಿ ಅಂಗೀಕಾರಗೊಂಡಿದೆ.
ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಮಂಡಿಸಿದ ಮಸೂದೆಯನ್ನು ಮಂಗಳವಾರ ಪರ್ಯಾಲೋಚನೆಯಾದ ನಂತರ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಏತನ್ಮಧ್ಯೆ ಈಗಾಗಲೇ ವಿಧಾನಸಭೆಯಲ್ಲಿ ಅನುಮೋದನೆಯಾಗಿರುವ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕವನ್ನು ಸಚಿವ ಅಶ್ವತ್ಥನಾರಾಯಣ್ ಮಂಡಿಸುತ್ತಿದ್ದಂತೆ ಚರ್ಚೆಯಿಲ್ಲದೆಯೇ ಅಂಗೀಕಾರ ಸಾಧ್ಯವಿಲ್ಲವೆಂದು ಪ್ರತಿಪಕ್ಷ ಸದಸ್ಯ ಮರಿತಿಬ್ಬೇಗೌಡ ಮತ್ತಿತರರು ವಿರೋಧಿಸಿದರು. ಒಂದು ಹಂತದಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಸದಸ್ಯ ಮರಿತಿಬ್ಬೇಗೌಡ ಸದನದ ಬಾವಿಗಿಳಿದಾಗ ಸಭಾಪತಿಯವರು ಕುಪಿತರಾದರು. ಈ ವೇಳೆ ಮಾತಿನ ಚಕಮಕಿ, ಕೂಗಾಟ, ಗದ್ದಲ ಕೇಳಿಬಂತು.