ಸುಂಟಿಕೊಪ್ಪ ಸಮೀಪದ ಸ್ಯಾಂಡಲ್ ವುಡ್ ತೋಟದಲ್ಲಿ ಮರಗಳ್ಳರು ಭಾರೀ ಗಾತ್ರದ ಬೀಟಿ ಮರವನ್ನು ಕಡಿದು ನಾಟಾಗಳಾಗಿ ಪರಿವರ್ತಿಸಿ ಸಾಗಾಟಕ್ಕೆ ಇರಿಸಿರುವ ಮಾಹಿತಿ ಮೇರೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಅವುಗಳನ್ನು ವಶಪಡಿಸಿಕೊಂಡಿದ್ದಾರೆ.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಕಾಡು ಬಳಿಯ ಸ್ಯಾಂಡಲ್ ವುಡ್ ತೋಟದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಭಾರೀ ಗಾತ್ರದ ಬೀಟಿ ಮರಗಳನ್ನು ರಾತ್ರಿ ವೇಳೆ ಕಡಿದು ಉರುಳಿಸಿ ದಿಮ್ಮಿಗಳನ್ನಾಗಿ ಪರಿವರ್ತಿಸಿ ಇರಿಸಿದ್ದರೆನ್ನಲಾಗಿದೆ.
ತೋಟದ ಕಾವಲುಗಾರ ಬೆಳಗಿ ಜಾವ ತೋಟ ವೀಕ್ಷಣೆಗೆಂದು ತೆರಳಿದ ಸಂಂರ್ಭ ಇದನ್ನು ಕಂಡು ತೋಟದ ವ್ಯವಸ್ಥಾಪಕರಿಗೆ ತಿಳಿಸಿದ್ದು, ತೋಟದ ವ್ಯವಸ್ಥಾಪಕ ಶ್ರೀಧರ್ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಯವರು ಆಗಮಿಸಿ, ಕತ್ತರಿಸಿಟ್ಟಿದ್ದ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆಗೆ ಸಾಗಿಸಿದ್ದಾರೆ.
ಕಳ್ಳರು ಮರ ಸಾಗಿಸುವ ಸಲುವಾಗಿ ಪಕ್ಕದ ಯಂಕನ ಕುಟುಂಬದ ಕುಶಾಲಪ್ಪ ಅವರ ಕಾಫಿ ತೋಟದಲ್ಲಿನ ರೋಬಸ್ಟಾ ಕಾಫಿ ಗಿಡಗಳನ್ನೂ ಕಡಿದು ನಾಶಗೊಳಿಸಿದ್ದಾರೆ.
ಈ ಭಾಗದಲ್ಲಿ ಮರಗಳ್ಳರ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಅರಣ್ಯ ಇಲಾಖೆಯವರ ನಿರ್ಲಕ್ಷ್ಯವೇ ಕಾರಣ ಎಂದು ಈ ಭಾಗದ ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಯಂಕನ ಕುಟುಂಬದ ಶೇಖರ್ ಎಂಬವರ ತೋಟದಿಂದ ಕಳ್ಳರು ಬೀಟಿ ಮರವನ್ನು ಕಡಿದು ಸಾಗಿಸಲು ಯತ್ನಿಸುವ ಸಂದರ್ಭ ಅರಣ್ಯ ಇಲಾಖೆಯವರು ಗಾಳಿಯಲ್ಲಿ ಗುಂಡು ಹಾರಿಸಿ ವಾಹನ ಸಹಿತ ಇಬ್ಬರನ್ನು ಬಂಧಿಸಿದ್ದರು.
ಆದರೆ ಕೆಲವೇ ದಿನಗಳಲ್ಲಿ ವಾಹನದೊಂದಿಗೆ ಆರೋಪಿಗಳು ಮಾಮೂಲಿನಂತೆ ರಾಜಾರೋಷವಾಗಿ ಸುತ್ತಾಡುವುದನ್ನು ಕಂಡು ಸಾರ್ವಜನಿಕರು ಆಶ್ಚರ್ಯ ವ್ಯಕ್ತಪಡಿಸಿದ್ದರು.
ಈ ಭಾಗದಲ್ಲಿ ಭಾರೀ ಗಾತ್ರದ ಬೀಟಿ ಮರಗಳಿದ್ದು ರಾತ್ರಿ ವೇಳೆ ಕಳ್ಳರು ಮರ ಸಾಗಾಟಗೊಳಿಸುತ್ತಿದ್ದರೂ, ಅರಣ್ಯ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.