ಇಂದು ಬೆಳಗ್ಗೆ 7.30ಕ್ಕೆ ಕಂಠೀರವ ಸ್ಟುಡಿಯೋ ಆವರಣದಲ್ಲಿ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ನಡೆದಿದ್ದು, ಅಂತ್ಯಸಂಸ್ಕಾರದವರೆಗೂ ಎಲ್ಲಾ ರೀತಿಯ ಸಹಕಾರ ನೀಡಿದ ಸರ್ಕಾರ ಮತ್ತು ಅಭಿಮಾನಿಗಳಿಗೆ ಅಪ್ಪು ಸಹೋದರ ರಾಘವೇಂದ್ರ ರಾಜಕುಮಾರ್ ಧನ್ಯವಾದ ತಿಳಿಸಿದ್ದಾರೆ.
ಅಂತ್ಯಸಂಸ್ಕಾರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅಭಿಮಾನಿಗಳು, ಸರ್ಕಾರದ ಸಹಕಾರದಿಂದ ಅಪ್ಪು ಅಂತ್ಯಕ್ರಿಯೆ ಶಾಂತಿಯುತವಾಗಿ ನೆರವೇರಿದೆ. ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು.
ಇವತ್ತು ಪೂಜೆ ಮಾತ್ರ ಮಾಡಲಾಗುತ್ತದೆ. 5ನೇ ದಿನ (ಮಂಗಳವಾರ) ಹಾಲು-ತುಪ್ಪ ಕಾರ್ಯ ನೆರವೇರಿಸುತ್ತೇವೆ. ಈ ಕಾರ್ಯದ ನಂತರ ಸಾರ್ವಜನಿಕರಿಗೆ ಪುನೀತ್ ಸಮಾಧಿ ನೋಡಲು ಕಂಠೀರವ ಸ್ಟುಡಿಯೋ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದರು.
ಅಪ್ಪಾಜೀ-ಅಮ್ಮನಿಗೆ ಅಪ್ಪು ಎಂದರೆ ತುಂಬಾ ಇಷ್ಟವಾಗಿತ್ತು. ಹಾಗಾಗಿ ಬೇಗನೇ ಅಪ್ಪು ಅವರಿದ್ದಲ್ಲಿ ಹೋಗಿದ್ದಾನೆ. ಪುನೀತ್ ಇಲ್ಲಾ ಎಂಬ ನೋವು ಕೊನೆಯವರೆಗೂ ಇರಲಿದೆ. ಅಭಿಮಾನಿಗಳ ಪ್ರೀತಿ, ಸಹಕಾರಕ್ಕೆ ಏನೂ ಹೇಳಲು ಸಾಧ್ಯವಿಲ್ಲ. ಅದಕ್ಕೆ ಅಪ್ಪಾಜಿ ಅಭಿಮಾನಿಗಳನ್ನು ದೇವರು ಎಂದಿದ್ದು ಎಂದರು.