ಬೆಂಗಳೂರು : ರಾಷ್ಟ್ರೋತ್ಥಾನದಲ್ಲಿ ಅ.30 ರಿಂದ ಕನ್ನಡ ಪುಸ್ತಕ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಒಂದು ತಿಂಗಳು ನಡೆಯಲಿರುವ ಈ ಕಾರ್ಯಕ್ರಮ ಬೆಂಗಳೂರಿನ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್ ಆವರಣದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ಜರುಗಲಿದೆ.
ಕನ್ನಡ ಪುಸ್ತಕ ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವಾರಾಂತ್ಯದಲ್ಲಿ ವಿಶೇಷ ಉಪನ್ಯಾಸಗಳು, ಪುಸ್ತಕ ಲೋಕಾರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಕಾರ್ಯಕ್ರಮವು ರಾಷ್ಟ್ರೋತ್ಥಾನ ಪರಿಷತ್ತಿನ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ ನೇರ ಪ್ರಸಾರವಾಗಲಿದೆ. ಕ್ರಿಡಾಪಟುಗಳು, ಸಾಹಿತಿಗಳು,ಕನ್ನಡ ಕಿರುತೆರೆ, ಬೆಳ್ಳಿತೆರೆಯ ನಟ-ನಟಿಯರು ಈ ಕಾರ್ಯಕ್ರಮಕ್ಕೆ ಭೇಟಿ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವವರು ಖರೀದಿಸಿದ ಪುಸ್ತಕದ ಮೇಲೆ ಅವರ ಹಸ್ತಾಕ್ಷರವನ್ನು ಪಡೆಯಬಹುದಾಗಿದೆ.
ಪುಸ್ತಕ ಪ್ರದರ್ಶನದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಸೇರಿದಂತೆ ಸುಮಾರು 50 ಪ್ರಕಾಶನ ಸಂಸ್ಥೆಗಳ 3,000ಕ್ಕೂ ಅಧಿಕ ಶೀರ್ಷಿಕೆಗಳ ಪುಸ್ತಕಗಳು ಲಭ್ಯ ಇರಲಿವೆ. ರಾಷ್ಟ್ರೋತ್ಥಾನ ಸಾಹಿತ್ಯದ ಪುಸ್ತಕಗಳಿಗೆ ಶೇ. 40 ರಿಯಾಯಿತಿ ಹಾಗೂ ಇತರ ಪ್ರಕಾಶಕರ ಪುಸ್ತಕಗಳಿಗೆ ಶೇ. 20 ರಿಯಾಯಿತಿ ಇರುತ್ತದೆ.
ಲೇಖಕರೊಂದಿಗೆ ಸಂವಾದ, ಲೇಖಕರ ಹಸ್ತಾಕ್ಷರದೊಂದಿಗೆ ಪುಸ್ತಕ ಖರೀದಿ ಹಾಗೂ ಲೇಖಕರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಅವಕಾಶವಿದೆ. ಪುಸ್ತಕ ಪ್ರದರ್ಶನವು ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತದೆ. ಅಕ್ಟೋಬರ್ 30 ರಂದು ಕನ್ನಡ ಪುಸ್ತಕ ಹಬ್ಬದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ. ಬಿ.ವಿ. ವಸಂತಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಲೇಖಕರು, ಕಾದಂಬರಿಕಾರ ಶ್ರೀ ಜೋಗಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳಲ್ಲೊಂದಾದ ರಾಷ್ಟ್ರೊತ್ಥಾನ ಸಾಹಿತ್ಯವು ಕಳೆದ ೫೫ಕ್ಕೂ ಅಧಿಕ ವರ್ಷಗಳಿಂದ ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ, ತತ್ವ, ಜ್ಞಾನ ಹಾಗೂ ಜೀವನಾದರ್ಶಗಳ ಹಿರಿಮೆಯನ್ನು ಸಾರುವಂತಹ ಪುಸ್ತಕಗಳನ್ನು ಪ್ರಕಟಿಸುತ್ತಾ ಬಂದಿದೆ.