ಬೆಂಗಳೂರು.ನ.6 : ಮುಂದಿನ ಸಾರ್ವತ್ರಿಕ ಚುನಾವಣೆಗೆ ಬಿಜೆಪಿಯಲ್ಲಿ ಈಗಿನಿಂದಲೇ ಸಿದ್ಧತೆ ಆರಂಭವಾಗಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ಪ್ರಮುಖ ನಾಯಕರ ರಾಜ್ಯ ಪ್ರವಾಸಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. ನವೆಂಬರ್ 12 ರಿಂದ ಬಿಜೆಪಿಯ ಪ್ರಮುಖ ನಾಯಕರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.
ಬಿಜೆಪಿಯ ನಾಲ್ವರು ನಾಯಕರ ನೇತೃತ್ವದಲ್ಲಿ ನಾಲ್ಕು ತಂಡಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಯೋಜಿಸಲಾಗಿದೆ. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್, ಮಾಜಿ ಸಿಎಂಗಳಾದ ಜಗದೀಶ್ ಶೆಟ್ಟರ್ ಮತ್ತು ಡಿ.ವಿ. ಸದಾನಂದ ಗೌಡರು ಪ್ರವಾಸದಲ್ಲಿರುತ್ತಾರೆ. ರಾಜ್ಯದ ನಾಲ್ಕು ಸಂಘಟನಾತ್ಮಕ ವಿಭಾಗಗಳಲ್ಲೂ ಬಿಜೆಪಿ ನಾಯಕರಿಂದ ಪ್ರವಾಸ ನಡೆಯಲಿದೆ.
ನಾಳೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಈ ಸಂಬಂಧ ಮಹತ್ವದ ಮಾಧ್ಯಮಗೋಷ್ಠಿ ನಡೆಯಲಿದೆ. ಈ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ನಾಯಕರ ರಾಜ್ಯ ಪ್ರವಾಸದ ನೀಲನಕ್ಷೆ ( ಬ್ಲೂ ಪ್ರಿಂಟ್ ) ಪ್ರಕಟವಾಗಲಿದೆ. ಮುಖ್ಯವಾಗಿ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಮಿಷನ್ 140 ಗುರಿ ಇಟ್ಟುಕೊಂಡಿದ್ದು, ಆ ಸಂಬಂಧ ಈಗಲೇ ಪಕ್ಷ ಸಂಘಟನೆಗೆ ಬಿಜೆಪಿ ಸಿದ್ಧವಾಗುತ್ತಿದೆ. ನವೆಂಬರ್ 9 ರಂದು ರಾಜ್ಯ ಬಿಜೆಪಿ ಪದಾಕಾರಿಗಳ ಸಭೆ ನಡೆಯಲಿದೆ.
ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಈ ಸಭೆ ನಡೆಯಲಿದ್ದು, ರಾಜ್ಯ ಪ್ರವಾಸದ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ. ನಾಲ್ಕು ತಂಡಗಳಿಂದ ರಾಜ್ಯ ಪ್ರವಾಸದ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಪ್ರವಾಸ ಯಶಸ್ವಿಗೊಳಿಸುವ ಬಗ್ಗೆ ಚರ್ಚೆ ನಡೆಯಲಿದೆ.
ಪ್ರವಾಸದ ವೇಳೆ ಸಂಘಟನಾತ್ಮಕವಾಗಿ ಬಿಜೆಪಿಯನ್ನು ಮತ್ತಷ್ಟು ಬಲಗೊಳಿಸುವ ಬಗ್ಗೆ ಸಮಾಲೋಚನೆ ನಡೆಯಲಿದೆ. ಉಳಿದಂತೆ ಪಕ್ಷ ಸಂಘಟನೆ, ಉಪಸಮರದ ಫಲಿತಾಂಶದ ಬಗ್ಗೆ ಚರ್ಚೆ ಆಗಲಿದೆ ಎಂದು ತಿಳಿದುಬಂದಿದೆ.