ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ನಿಧನರಾದ ದಿನ ಅವರು ಮೊದಲು ಹೋಗಿದ್ದ ಡಾ.ರಮಣ್ರಾವ್ ಕ್ಲಿನಿಕ್ನ ವಿಡಿಯೋ ಫೂಟೇಜ್ಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕು ಎಂದು ಅವರ ಅಭಿಮಾನಿ ಎನ್ನಲಾದ ಅರುಣ್ ಪರಮೇಶ್ವರ್ ಆಗ್ರಹಿಸಿದ್ದಾರೆ.
ಡಾ.ರಮಣರಾವ್ ಕ್ಲಿನಿಕ್ನಲ್ಲಿ ಪುನೀತ್ಗೆ ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯವಾಗಿದೆ ಎಂದು ಆಪಾದಿಸಿ ತನಿಖೆ ಕೋರಿ ಪೊಲೀಸರಿಗೆ ದೂರು ನೀಡಿರುವ ಕುರುಬರಹಳ್ಳಿಯ ಅರುಣ್ ಪರಮೇಶ್ವರ್ ಇಂದು ದಿಗ್ವಿಜಯ ನ್ಯೂಸ್ನೊಂದಿಗೆ ಮಾತನಾಡಿದರು.
‘ಪ್ರಾಥಮಿಕ ಚಿಕಿತ್ಸೆಗಾಗಿ ಅಪ್ಪು ತೆರಳಿದ ಕ್ಲಿನಿಕ್ನಲ್ಲಿ ಏನು ನಡೆಯಿತು? ಪುನೀತ್ ಪ್ರಾಣ ಉಳಿಸಬಹುದಾಗಿದ್ದ ಗೋಲ್ಡನ್ ಅವರ್ ಯಾಕೆ ಮಿಸ್ ಆಯ್ತು? ಪುನೀತ್ರನ್ನು ಆಸ್ಪತ್ರೆಗೆ ಆಯಂಬುಲೆನ್ಸ್ನಲ್ಲಿ ಯಾಕೆ ಕಳಿಸಲಿಲ್ಲ? ಇವೆಲ್ಲಾ ಪ್ರಶ್ನೆಗಳು ಬಹುತೇಕ ಅಭಿಮಾನಿಗಳನ್ನು ಕಾಡುತ್ತಿವೆ. ಹೀಗಿರುವಾಗ ಅಂದಿನ ಕ್ಲಿನಿಕ್ನ ಸಿಸಿಟಿವಿ ಫೂಟೇಜನ್ನು ರಿಲೀಸ್ ಮಾಡದೇ ಇರೋದು ಹೆಚ್ಚು ಅನುಮಾನಗಳಿಗೆ ಆಸ್ಪದ ನೀಡ್ತಾ ಇದೆ. ಡಾ.ರಮಣರಾವ್ ಮುಂಚೆ ಬೇರೆ ರೀತಿ ಹೇಳಿದ್ದರು, ಈಗ ಬೇರೆ ರೀತಿ ಹೇಳ್ತಾ ಇದ್ದಾರೆ. ಆದ್ದರಿಂದ ಸಿಸಿಟಿವಿ ಫೂಟೇಜನ್ನು ತಕ್ಷಣ ಬಿಡುಗಡೆ ಮಾಡಬೇಕು’ ಎಂದು ಪರಮೇಶ್ವರ್ ಹೇಳಿದರು.