ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳ ಪ್ರಾಧ್ಯಾಪಕರ ನಿಯೋಜನೆ ಏಕಾಏಕಿ ರದ್ದು ಆದೇಶ ವಾಪಸ್, 900 ಉಪನ್ಯಾಸಕರ ಅವೈಜ್ಞಾನಿಕ ವರ್ಗಾವಣೆ ಕೈಬಿಡಬೇಕು ಎಂದು ಪಟ್ಟು ಹಿಡಿದಿರುವ ಜೆಡಿಎಸ್ ಎಂಎಲ್ಸಿ ಮರಿತಿಬ್ಬೇಗೌಡ, ವಿಕಾಸಸೌಧದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ರ ಕೊಠಡಿ ಮುಂದೆ ಸೋಮವಾರ ಧರಣಿ ಹೂಡಿದ್ದಾರೆ.
ಧರಣಿ ಸ್ಥಳಕ್ಕೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹಾಗೂ ಕಾಂಗ್ರೆಸ್ ಸದಸ್ಯರು ಭೇಟಿ ನೀಡಿ ನೈತಿಕ ಬೆಂಬಲ ಸೂಚಿಸಿದ್ದಲ್ಲದೆ, ಅವೈಜ್ಞಾನಿಕ ವರ್ಗಾವಣೆ ಹಾಗೂ ದಿಢೀರ್ ನಿಯೋಜನೆ ರದ್ದು ಆದೇಶ ಹಿಂತೆಗೆದುಕೊಳ್ಳಲು ಸರ್ಕಾರಕ್ಕೆ ಆಗ್ರಹಿಸಿದರು.
ಬಿಜೆಪಿ ಎಂಎಲ್ಸಿಗಳಾದ ಪುಟ್ಟಣ್ಣ ಹಾಗೂ ಅರುಣ್ ಶಹಾಪುರ ಧಾವಿಸಿ ಮನವೊಲಿಸಲು ಪ್ರಯತ್ನಿಸಿದರು. ನಿಯೋಜನೆ ರದ್ದು ಆದೇಶ ವಾಪಸ್ ಪಡೆದು, ವಲಯವಾರು ಮುಕ್ತ ವಿಶೇಷ ಅದಾಲತ್ ಮೂಲಕ ಸ್ಥಳ ನಿಯೋಜನೆಗೆ ಸರ್ಕಾರಕ್ಕೆ ಮನವಿ ಮಾಡಿರುವುದನ್ನು ಗಮನಕ್ಕೆ ತಂದರು.