ಬೆಂಗಳೂರು,ಅ.26 : ಬಿಜೆಪಿ ಮತ್ತು ಆರ್ಎಸ್ಎಸ್ನ ಪೈಶಾಚಿಕತೆ ವಿರುದ್ಧ ಹೋರಾಟ ಮಾಡಿ ಗೆಲ್ಲಬೇಕಾದರೆ ಕಾಂಗ್ರೆಸ್ನಲ್ಲಿ ಶಿಸ್ತು ಮತ್ತು ಏಕತೆ ಅಗತ್ಯ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಗಳು ರಾಜ್ಯ ಅಧ್ಯಕ್ಷರುಗಳು ಹಾಗೂ ಇತರ ನಾಯಕರನ್ನು ಉದ್ದೇಶಿಸಿ ಇಂದು ಮಾತನಾಡಿದ ಸೋನಿಯಾ ಗಾಂಧಿ, ಬಿಜೆಪಿ ಮತ್ತು ಆರ್ಎಸ್ಎಸ್ ನ ಸೈದ್ದಾಂತಿಕ ಪೈಶಾಚಿಕತೆ ವಿರುದ್ದ ಹೋರಾಟ ನಡೆಸಬೇಕಿದೆ.ಅವರ ತಪ್ಪುಗಳು ಮತ್ತು ಸುಳ್ಳುಗಳನ್ನು ಜನರ ಮುಂದೆ ಬಯಲು ಮಾಡಬೇಕಿದೆ. ಆಗ ಮಾತ್ರ ನಾವು ಯುದ್ಧ ಗೆಲ್ಲಲು ಸಾಧ್ಯ ಎಂದರು.
ಎಐಸಿಸಿ ಬಹುತೇಕ ಪ್ರತಿದಿನ ದೇಶವನ್ನು ಕಾಡುವ ಪ್ರಮುಖ ಸಮಸ್ಯೆಗಳ ಕುರಿತು ಹೇಳಿಕೆ ಬಿಡುಗಡೆ ಮಾಡುತ್ತದೆ. ಆದರೆ ಅದು ಕ್ಷೇತ್ರ ಮತ್ತು ಜಿಲ್ಲಾ ಮಟ್ಟಕೆ ತಲುಪುತ್ತಿಲ್ಲ. ಬಹಳಷ್ಟು ವಿಷಯಗಳಲ್ಲಿ ಸ್ಪಷ್ಟತೆಯ ಕೊರತೆ ಇದೆ. ನಮ್ಮ ರಾಜ್ಯದ ನಾಯಕರಲ್ಲಿ ನೀತಿಗಳ ವಿಷಯದಲ್ಲಿ ಗೊಂದಲವಿದೆ. ಅವುಗಳಿಗೆ ಸ್ಪಷ್ಟನೆ ನೀಡಲು ಎಐಸಿಸಿ ಸರಿಯಾದ ದಾರಿ ಅನುಸರಿಸಬೇಕಿದೆ ಎಂದು ಹೇಳಿದರು.
ಶಿಸ್ತು ಮತ್ತು ಏಕತೆಯಲ್ಲಿ ನಾವು ಉನ್ನತ ಶಿಖರ ತಲುಪಬೇಕು. ಯಾವುದೇ ವಿಷಯಗಳಿದ್ದರೂ ಮತ್ತು ಪ್ರತಿಯೊಬ್ಬರೂ ಪಕ್ಷವನ್ನು ಬಲಪಡಿಸಲು ಬಳಸಬೇಕು. ನಮ್ಮ ವೈಯಕ್ತಿಕ ಆಸೆಗಳಿಗಾಗಿ ಪಕ್ಷದ ಮೇಲೆ ಸವಾರಿ ಮಾಡಬಾರದು. ಹಾಗಾದಾಗ ಮಾತ್ರ ಸಮಗ್ರತೆ ಮತ್ತು ವೈಯಕ್ತಿಕ ಯಶಸ್ಸು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಅನ್ಯಾಯ ಮತ್ತು ಅಸಮಾನತೆಯ ವಿರುದ್ಧ ತಳಮಟ್ಟದಲ್ಲಿ ವ್ಯಾಪಕವಾದ ಪ್ರತಿಭಟನೆಗಳನ್ನು ನಡೆಸಿದಾಗ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿರುವುದಕ್ಕೆ ನಮ್ಮ ಇತಿಹಾಸವೇ ಸಾಕ್ಷಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ನಮ್ಮ ಹೆಮ್ಮೆಯ ಸಂಸ್ಥೆಗಳನ್ನು ಪರಭಾರೆ ಮಾಡುತ್ತಿದೆ. ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಲಾಗುತ್ತಿದೆ. ಪ್ರಜಾಪ್ರಭುತ್ವದ ಆಶಯಗಳು ಪ್ರಶ್ನೆಗೀಡಾಗುತ್ತಿವೆ ಎಂದು ಸೋನಿಯಾ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.