ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ‘ಗೆ ನಡೆಯುವ ಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಇನ್ನು ಅಂತಿಮಗೊಳಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಜನತಾ ಪರ್ವ 1.O ಎರಡನೇ ಹಂತದ ಕಾರ್ಯಗಾರ ‘ ಜನತಾ ಸಂಗಮದ ನಾಲ್ಕನೇ ದಿನ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಹಾಸನದಿಂದ ಸೂರಜ್ ರೇವಣ್ಣ ಸ್ಪರ್ಧೆ ಪ್ರಸ್ತಾವನೆ ಪಕ್ಷದ ಕಚೇರಿಗೆ ಬಂದಿಲ್ಲ ಎಂದರು.
ಹಾಸನ ಜಿಲ್ಲೆಯಲ್ಲಿ ಆರು ಶಾಸಕರು ಹಾಗೂ ಮುಖಂಡರು ಇದ್ದಾರೆ. ಅವರು ಯಾವ ಅಭ್ಯರ್ಥಿಯನ್ನು ಅಂತಿಮ ಮಾಡುತ್ತರೋ ನೋಡಬೇಕು. ಸೂಕ್ತ ಅಭ್ಯರ್ಥಿ ಹೆಸರನ್ನು ಸೂಚಿಸಿದ ನಂತರ ಮಾತನಾಡುತ್ತೇನೆ ಎಂದರು ಅವರು.
ಉಳಿದಂತೆ ಎಲ್ಲೆಲ್ಲಿ ನಮ್ಮ ಅಭ್ಯರ್ಥಿಗಳನ್ನು ಹಾಕಬೇಕೋ ಅಲ್ಲೆಲ್ಲಾ ಈಗಾಗಲೇ ಚರ್ಚೆ, ಸಮಾಲೋಚನೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.