ಬೆಂಗಳೂರು ನಮ್ಮ ಮೆಟ್ರೋ ರೈಲು ಸೇವೆಯ ಸಮಯವನ್ನು ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ ವಿಸ್ತರಣೆ ಮಾಡಲಾಗಿದೆ. ಕೊರೋನಾ ಕಾರಣದಿಂದ ಈ ಮೊದಲು ರೈಲು ಓಡಾಟದ ಅವಧಿ ಬೆಳಗ್ಗೆ 7 ಗಂಟೆಯಿಂದ ಸಂಜೆ 8 ಗಂಟೆ ವರೆಗೆ ಮಾತ್ರ ಇತ್ತು. ಇದೀಗ ರಾತ್ರಿ 10ರ ವರೆಗೆ ವಿಸ್ತರಿಸಲಾಗಿದೆ.
ನಮ್ಮ ಮೆಟ್ರೋ ಸೇವಾ ಅವಧಿಯನ್ನು ವಿಸ್ತರಿಸುವಂತೆ ಮಾಜಿ ಸಚಿವ ಸುರೇಶ್ಕುಮಾರ್ ಅವರು ಸಿಎಂ ಬಸವರಾಜ ಬೊಮ್ಮಾಯಿಗೆ
ಪತ್ರ ಬರೆದಿದ್ದರು.
ನೈಟ್ ಕರ್ಫ್ಯೂ ಹಿನ್ನೆಲೆ ರಾತ್ರಿ 9ರವರೆಗೆ ಮಾತ್ರ ಮೆಟ್ರೋ ಸಂಚಾರವಿದೆ. ರಾತ್ರಿ 9 ಗಂಟೆಯ ಬಳಿಕ ಮೆಟ್ರೋ ಸಂಚಾರ ಇರುವುದಿಲ್ಲ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ರಾತ್ರಿ 10 ಗಂಟೆಯವರೆಗೆ ಮೆಟ್ರೋ ಸೌಲಭ್ಯ ಕಲ್ಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಶಾಸಕ ಸುರೇಶ್ ಕುಮಾರ್ ಪತ್ರ ಬರೆದಿದ್ದರು.
ನೈಟ್ ಕರ್ಫ್ಯೂ 11 ಗಂಟೆಯ ನಂತರ ವಿಧಿಸುವ ಬಗ್ಗೆ ಪರಿಶೀಲನೆ ನಡೆಸಬೇಕು. ಲಾಕ್ಡೌನ್ ಮುಂಚೆ ಮೆಟ್ರೋ ನಿಲ್ದಾಣಗಳಲ್ಲಿ ಎರಡು ಕಡೆ ದ್ವಾರಗಳು ಇದ್ದವು. ಈಗ ಒಂದು ಕಡೆ ಮಾತ್ರ ದ್ವಾರ ಇದ್ದು, ಸಮಸ್ಯೆಯಾಗುತ್ತಿದೆ. ಹೀಗಾಗಿ ಎರಡು ಕಡೆ ಪ್ರವೇಶ ದ್ವಾರ ತೆರೆದು ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಿ ಎಂದು ಸುರೇಶ್ ಕುಮಾರ್ ಬರೆದ ಪತ್ರದಲ್ಲಿ ವಿನಂತಿ ಮಾಡಿದ್ದರು.