ಶ್ರೀನಿವಾಸಪುರ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಿತ್ತನೆ ಮಾಡಲಾಗಿರುವ ಸೊಪ್ಪಿನ ಬೀಜ ಮೊಳಕೆ ಬರುತ್ತಿಲ್ಲ,ಮಾರುಕಟ್ಟೆಯಲ್ಲಿ ಸೊಪ್ಪಿಗೆ ಭಾರಿ ಬೇಡಿಕೆ ಬಂದಿದೆ. ಸೊಪ್ಪು ಕಾಣಿಸಿದರೆ ಸಾಕು ಗ್ರಾಹಕರು ಬೆಲೆಯನ್ನು ಲೆಕ್ಕಿಸದೆ ಕೊಳ್ಳಲು ಮುಗಿಬೀಳುತ್ತಿದ್ದಾರೆ.
ಮೊಳಕೆ ಬಂದಿರುವ ಕಡೆ ಎಲೆ ಬರುವ ಹಂತದಲ್ಲೇ ಕೊಳೆತುಹೋಗುತ್ತಿದೆ. ಅಪರೂಪಕ್ಕೆ ಬೆಳೆದಿರುವ ಸೊಪ್ಪು ಮಾತ್ರ ಮಾರುಕಟ್ಡೆಗೆ ಬರುತ್ತಿದೆ. ಆದರೂ ಕಟ್ಟೊಂದು ₹30ರಿಂದ ₹35 ರವರೆಗೆ ಮಾರಾಟವಾಗುತ್ತಿದೆ. ದಂಟು ಸೊಪ್ಪು ಎಳೆಯದಾಗಿದ್ದು, ಗುಣಮಟ್ಟ ಹೊಂದಿದ್ದರೆ, ಹೆಚ್ಚುವರಿಯಾಗಿ ₹5 ನೀಡಲು ಹಿಂದೆ ಮುಂದೆ ನೋಡುವುದಿಲ್ಲ.
ಟೊಮೆಟೊ ಬೆಲೆ ಗಗನಕ್ಕೇರಿದ್ದರೆ, ಯಾವುದೇ ತರಕಾರಿ ಬೆಲೆ ಕೆ.ಜಿಯೊಂದಕ್ಕೆ ₹80ಕ್ಕಿಂತ ಕಡಿಮೆ ಸಿಗುವುದು ಅಪರೂಪ. ಈ ಮಧ್ಯೆ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಆಲೂಗಡ್ಡೆ ಬೆಲೆಯೂ ಹೆಚ್ಚಿದೆ. ತರಕಾರಿ ಬೆಲೆಯನ್ನು ಗಮನಿಸಿದರೆ, ಚಿಕನ್ ಅಗ್ಗ ಎಂಬ ಮಾತು ಮಾಂಸಾಹಾರಿಗಳಿಂದ ಕೇಳಿಬರುತ್ತಿದೆ.
ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ತರಕಾರಿ ಬೆಲೆ ಹೆಚ್ಚಿರುತ್ತದೆ. ಆಮೇಲೆ ನಿಧಾನವಾಗಿ ಸಾಮಾನ್ಯ ಮಟ್ಟಕ್ಕೆ ಇಳಿಯುತ್ತದೆ. ಆದರೆ ಈ ಬಾರಿ ಎಡೆಬಿಡದೆ ಸುರಿದ ಭಾರಿ ಮಳೆಯ ಪರಿಣಾಮವಾಗಿ ಊಜಿ ನೊಣ ನಿಯಂತ್ರಣ ಸಾಧ್ಯವಾಗಲಿಲ್ಲ. ಜತೆಗೆ ಕೊಳೆ ರೋಗ ಎಲ್ಲ ತರಕಾರಿ ಬೆಳೆಗಳಿಗೂ ಮಾರಕವಾಗಿ ಪರಿಣಮಿಸಿತು. ಇದರಿಂದಾಗಿ ಮಾರುಕಟ್ಟೆಗೆ ತರಕಾರಿ ಆವಕ ಪ್ರಮಾಣ ಕುಸಿಯಿತು.
‘ಈ ಬಾರಿ ಹುಚ್ಚು ಮಳೆ ಎಲ್ಲವನ್ನೂ ನುಂಗಿ ಹಾಕಿತು. ಅಳಿದುಳಿದ ಬೆಳೆಯಿಂದ ಪಡೆದ ಅಷ್ಟಿಷ್ಟು ಉತ್ಪನ್ನದ ಲಾಭ ರೈತರಿಗಿಂತ ಹೆಚ್ಚಾಗಿ ಮಧ್ಯವರ್ತಿಗಳಿಗೆ ಸಿಗುತ್ತಿದೆ’ ಎಂಬುದು ರೈತರ ಅಳಲು.