ಬೆಂಗಳೂರು : ರಾಜ್ಯದಲ್ಲಿ ಆಭರಣ ವಲಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಉದ್ಯಮಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಸಂಪೂರ್ಣ ಸಹಕಾರ ಹಾಗೂ ತೆರಿಗೆ ವಿನಾಯ್ತಿಯನ್ನು ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರಕಟಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇಂದು ಆರಂಭವಾಗಿರುವ ಅಂತಾರಾಷ್ಟ್ರೀಯ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಭರಣ ವಲಯದಲ್ಲಿ ಯಾರೇ ಉದ್ಯಮಿಗಳು ಬಂಡವಾಳ ಹೂಡಲು ಮುಂದೆ ಬಂದರೆ ನಮ್ಮ ಸರ್ಕಾರ ಸಂಪೂರ್ಣವಾಗಿ ಸಹಕಾರ ಕೊಡಲಿದೆ. ಅಗತ್ಯವಾದ ನೆರವು ಜೊತೆಗೆ ರಿಯಾಯ್ತಿಯನ್ನು ನೀಡಲಾಗುವುದು ಎಂದು ಘೋಷಿಸಿದರು.
ರಫ್ತು ಗುರಿ ಸಾಧಿಸುವಲ್ಲಿ ರತ್ನಗಳು ಮತ್ತು ಆಭರಣ ವಲಯವು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಬಂಡವಾಳ ಹೂಡಲು ಬರುವ ಉದ್ಯಮಿಗಳಿಗೆ ನಾವು ಮುಕ್ತ ಸ್ವಾಗತಕೋರಿ ಕೆಂಪು ರತ್ನಗಂಬಳಿ ಹಾಕುತ್ತೇವೆ ಎಂದು ಹೇಳಿದರು.