ವಿಜಯಪುರ: ಸಿಂದಗಿ ವಿಧಾನ ಸಭೆ ಕ್ಷೇತ್ರದ ಜೆಡಿಎಸ್ ಟಿಕೆಟ್ ಅನ್ನು ದಿ. ಶಿವಾನಂದ ಪಾಟೀಲ ಸೋಮಜಾಳ ಅವರ ಪತ್ನಿ ವಿಶಾಲಾಕ್ಷಿ ಅವರಿಗೆ ಘೋಷಣೆ ಮಾಡಲಾಗಿದೆ.
ಈ ಮುಂಚೆ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದ್ದ ಮಾಜಿ ಸೈನಿಕ ಶಿವಾನಂದ ಪಾಟೀಲ ಸೋಮಜಾಳ ಅವರು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ವಿಜಯಪುರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಸಿಂದಗಿಗೆ ಶ್ರದ್ಧಾಂಜಲಿ ಸಭೆಗೆ ಆಗಮಿಸಿದ್ದ ಎಚ್. ಡಿ. ಕುಮಾರಸ್ವಾಮಿ ಸಿಂದಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶಾಲಾಕ್ಷಿ ಶಿವಾನಂದ ಪಾಟೀಲ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರು.
ಬಳಿಕ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, ನಿಮ್ಮ ಮಡಿಲಿಗೆ ನನ್ನ ತಂಗಿಯನ್ನು ಹಾಕಿದ್ದೇವೆ. ಶಿವಾನಂದ ಪಾಟೀಲ ಸೋಮಜಾಳ ಅವರಿಗೆ ನುಡಿನಮನ ಸಲ್ಲಿಸಬೇಕೆಂದರೆ ಅವರ ಪತ್ನಿಯನ್ನು ಗೆಲ್ಲಿಸಬೇಕು. ಈ ಮೂಲಕ ಅವರ ಕನಸನ್ನು ನನಸು ಮಾಡಬೇಕು ಎಂದು ಜನರ ಆಶೀರ್ವಾದ ಕೋರಿದರು.
ಈ ಘೋಷಣೆಯಾಗುತ್ತಿದ್ದಂತೆ ವೇದಿಕೆಯ ಮೇಲೆ ಬಂದ ವಿಶಾಲಾಕ್ಷಿ ಮತ್ತು ಅವರ ಮಗ ರಕ್ಷಿತ ಮತ್ತು ಮಗಳು ಕೈಮುಗಿದು ನಿಂತು ಸಿಂದಗಿ ಜನರ ಆಶೀರ್ವಾದ ಬಯಸಿದರು. ಈ ಸಂದರ್ಭದಲ್ಲಿ ಶಾಸಕ ಡಾ. ದೇವಾನಂದ ಚವ್ಹಾಣ, ವೆಂಕಟಗೌಡ ನಾಡಗೌಡ, ಬಂಡೆಪ್ಪ ಕಾಶೆಂಪುರ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಜೆಡಿಎಸ್ ಮುಖಂಡರಾದ ಜೆಡಿಎಸ್ ಮುಖಂಡರಾದ ಸುನೀತಾ ದೇವಾನಂದ ಚವ್ಹಾಣ, ದಾನಪ್ಪಗೌಡ ಚನಗೊಂಡ, ಮಹ್ಮದ ಉಸ್ತಾದ, ಪ್ರಕಾಶ ಹಿರೆಕುರುಬರ, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.