ವಿಜಯಪುರ: ಕಲಾ ಮಾಧ್ಯಮದಲ್ಲಿ ರಾಜ್ಯಕ್ಕೆ ಮೊದಲ ರ್ ಬಂದಿರುವ ಬಿಎಲ್ಡಿಇ ಸಂಸ್ಥೆಯ ಎಸ್.ಎಸ್. ಕಾಲೇಜಿನ ವಿದ್ಯಾರ್ಥಿ ವೇದಾಂತ ನಾವಿ ಭಾಗ್ಯಗಳ ನೆರವಿನಿಂದ ಬಂದ ಧೀಮಂತ ಹುಡುಗ ಎಂದು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಹೇಳಿದ್ದಾರೆ. ಸಾಧನೆ ಮಾಡಿರುವ ಈ ಹುಡಗನನ್ನು ಸತ್ಕರಿಸಿ, ಆತನ ಭವಿಷ್ಯಕ್ಕೆ ಶುಭ ಹರಸಿ ಮಾತನಾಡಿದ್ದಾರೆ.
ಬಡ ಕುಟುಂಬದ ಈ ಪ್ರತಿಭಾವಂತನಿಗೆ ತಂದೆ ತೀರಿದ್ದಾನೆ. ತಾಯಿ ಮತ್ತು ಅಕ್ಕ ಇದ್ದಾರೆ. ಇವರ ಕುಟುಂಬ ನಿರ್ವಹಣೆಗೆ ಬಹಳ ಕಷ್ಟವಿತ್ತು. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರ ಸರಕಾರ ನೀಡಿದ ಭಾಗ್ಯ ಲಕ್ಷ್ಮಿ, ಗೃಹ ಲಕ್ಷ್ಮಿ ಯೋಜನೆಗಳೇ ಇವರಿಗೆ ಆಧಾರವಾಗಿದ್ದವು ಎಂದು ಸ್ವತಃ ವೇದಾಂತ್ ಉಪಕಾರ ಸ್ಮರಣೆಯಿಂದ ಹೇಳಿದ್ದಾನೆ. ಇದು ಜನಾನುರಾಗಿ, ಜನಪರ ಸರಕಾರದ ಸಾರ್ಥಕ್ಯವಾಗಿದೆ. ಕಷ್ಟ ಗೊತ್ತಿಲ್ಲದ, ಬಡವರ ಬವಣೆ ಅರಿಯದ ಜನ ಬಿಟ್ಟಿ ಭಾಗ್ಯ, ಪುಕ್ಕಟೆ ಗ್ಯಾರಂಟಿ ಎಂದು ಕುಹಕವಾಡಿದ್ದರು. ಅವರಿಗೆಲ್ಲ ಇಂತಹ ಉದಾಹರಣೆಗಳ ಮೂಲಕ ಉತ್ತರ ಸಿಗುತ್ತಲೇ ಇದೆ ಎಂದು ಆಲಗೂರ ಹೇಳಿದ್ದಾರೆ.
ವೇದಾಂತ್ನಂತಹ ಲಕ್ಷಾಂತರ ಕುಟುಂಬಗಳು ರಾಜ್ಯ ಸರಕಾರದ ಯೋಜನೆಗಳಿಂದ ನಿಟ್ಟುಸಿರು ಬಿಡುತ್ತಿವೆ. ಅನೇಕ ಪ್ರತಿಭೆಗಳು ನೆಮ್ಮದಿಯಿಂದ ಶಿಕ್ಷಣ ಪಡೆಯುತ್ತಿವೆ. ಈತ ವಸತಿ ನಿಲಯದಲ್ಲಿದ್ದು ಓದಿದ್ದಾನೆ.
ಮುಂದೆಯೂ ಇಂತಹವರ ನೆರವಿಗೆ ಸರಕಾರ ಇರುತ್ತದೆ. ಮಾನ್ಯ ಸಚಿವರಾದ ಎಂ.ಬಿ. ಪಾಟೀಲರು ಕೂಡ ಇವನ ಮುಂದಿನ ಶಿಕ್ಷಣಕ್ಕೆ ಸಹಾಯ ನೀಡುವುದಾಗಿ ಹೇಳಿದ್ದು ಹೆಮ್ಮೆಯ ವಿಷಯ. ಗ್ಯಾರಂಟಿಗಳನ್ಮು ಟೀಕಿಸುತ್ತಿದ್ದವರೇ ಈಗ ತಾವೇ ಗ್ಯಾರಂಟಿ ಜಪ ಮಾಡುತ್ತಿರುವುದು ವಿಪರ್ಯಾಸ ಎಂದಿದ್ದಾರೆ.