ವಿಜಯಪುರ: ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಪುತ್ರಿ ನೇಹಾ ಹಿರೇಮಠ ಎಂಬ ಮುಗ್ಧ ಬಾಲಕಿಯನ್ನು ಯುವಕನೊಬ್ಬ ಕಾಲೇಜು ಆವರಣದಲ್ಲಿ ಹಾಡು ಹಗಲಲ್ಲೇ ಅಮಾನವೀಯವಾಗಿ ಹತ್ಯೆ ಮಾಡಿರುವುದು ತೀವ್ರ ಖಂಡನೀಯ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬುದಕ್ಕೆ ಈ ಕೃತ್ಯ ಜ್ವಲಂತ ಸಾಕ್ಷಿಯಾಗಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ನೇಹಾ ಹತ್ಯೆ ಪ್ರಕರಣನ್ನು ತೀವ್ರವಾಗಿ ಖಂಡಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ವಿಶೇಷವಾಗಿ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಇತ್ತಿಚೆಗೆ ಹತ್ಯೆ, ಸ್ಪೋಟದಂತಹ ಅಪರಾಧಿಕ ಕೃತ್ಯಗಳು ಹೆಚ್ಚಾಗಿದ್ದು, ದುಷ್ಕರ್ಮಿಗಳು, ಕೊಲೆಗಡುಕರಿಗೆ ಕಾನೂನಿನ ಮೇಲೆ ಯಾವುದೇ ಭಯವಿಲ್ಲದಂತಾಗಿದೆ. ನೇಹಾ ಬಾಲಕಿಯ ಕೊಲೆಗಾರನ ವಿರುದ್ಧ ಪೊಲೀಸ್ ಇಲಾಖೆ ನಿರ್ಧಾಕ್ಷಿಣ್ಯವಾಗಿ ಕಠಿಣ ಶಿಕ್ಷೆ ವಿಧಿಸಿ, ಇಂತಹ ದುಷ್ಠರಿಗೆ ಎಚ್ಚರಿಕೆಯ ಗಂಟೆಯಾಗುವಂತೆ ಕ್ರಮಕ್ಕೆ ಮುಂದಾಗಬೇಕು.
ಇಂತಹ ದುಷ್ಕೃತ್ಯಗಳಿಗೆ ದುಷ್ಠರಿಗೆ ಕಡಿವಾಣ ಹಾಕುವ ಕಾರಣಕ್ಕಾಗಿಯೇ ನಮ್ಮ ರಕ್ಷಣೆಗೆ, ವಿಕಸಿತ ಭಾರತಕ್ಕಾಗಿ ಮತ್ತೊಮ್ಮೆ ಮೋದಿ ಬರಬೇಕೆಂಬುದು ಇಡಿ ದೇಶದ ಒಕ್ಕೊರಳಿನ ಧ್ವನಿಯಾಗಿದೆ.