ವಿಜಯಪುರ: ಈ ಬಾರಿ ಲೋಕಸಭೆಯಲ್ಲಿ ಬದಲಾವಣೆ ತರಲೇಬೇಕೆಂದು ನಾವೆಲ್ಲ ಒಗ್ಗಟ್ಟಾಗಿ ನಿಂತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಾಗಠಾಣದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ನಾಗಠಾಣ ಭಾಗಕ್ಕೆ ಶಾಶ್ವತ ನೀರಿನ ಪರಿಹಾರಕ್ಕೆ ಕೆರೆ ತುಂಬಲಾಗುವುದು. ಈ ಕ್ಷೇತ್ರದಲ್ಲಿ ಹಿಂದೆ ತಾವು, ಶಿವಾನಂದ ಪಾಟೀಲ, ಆಲಗೂರರು ಶಾಸಕರಾಗಿ ಕೆಲಸ ಮಾಡಿದ್ದೇವೆ. ಪಕ್ಕದ ಇಂಡಿ ಶಾಸಕರಿದ್ದಾರೆ. ಮಕಣಪುರ ಕೆರೆ ತುಂಬಿಸಿದ್ದೇವೆ. ಮುಂದೆಯೂ ನಿಮ್ಮೊಂದಿಗೆ ನಾವೆಲ್ಲ ಇರುತ್ತೇವೆ. ಆಲಗೂರರು ಸಂಸದರಾದರೆ ಆಲಮಟ್ಟಿ ಎತ್ತರ ಹೆಚ್ಚಿಸಲು ಸಂಸತ್ನಲ್ಲಿ ಹೋರಾಟ ಮಾಡಲಿದ್ದಾರೆ. ಆದಾದರೆ ಜಿಲ್ಲೆ ಸಂಪೂರ್ಣ ನೀರಾವರಿ ಆಗುತ್ತದೆ ಎಂದು ಭರವಸೆ ನೀಡಿದರು.
ಮೋದಿಯವರ ಮುಖ ನೋಡಿ ಓಟು ಹಾಕಿ ಎನ್ನುವವರಿಗೆ ಮೋದಿಯವರು ಏನು ಮಾಡಿದ್ದಾರೆ ಎಂದು ಕೇಳಿ. ಸಬ್ ಕಾ ಸಾಥ್ ಎಂದವರು ಜಗಳ ಹಚ್ಚಿದ್ದಾರೆ. ಇನ್ನೂ ಮುಂದೆ ಹೋಗಿ ಹೆಣ್ಣುಮಕ್ಕಳ ತಾಳಿಯ ಬಗ್ಗೆ ಮಾತನಾಡುವ ಮಟ್ಟಕ್ಕೆ ಹೋಗಿದ್ದಾರೆ. ಚುನಾವಣಾ ಬಾಂಡ್ನಿಂದ ಇವರ ಬಂಡವಾಳ ಬಯಲಾಗಿದೆ. ಸ್ವಚ್ಛ ಸ್ವಚ್ಛ ಎಂದವರ ದೇಶದ ದೊಡ್ಡ ಹಗರಣ ಇದಾಗಿದೆ. ಯುವಕರಿಗೆ ಉದ್ಯೋಗ ಸಿಗಲಿಲ್ಲ. ಹೇಳಿದಂತೆ ನಡೆದುಕೊಳ್ಳಲಿಲ್ಲ. ಉದ್ಯಮಿಗಳ ಆದರೆ ದೇಶವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದರು.
ಕೃಷ್ಣಾ ತೀರ್ಪಿನ ಸದ್ಬಳಕೆಯಾಗಲು ನಮ್ಮ ಸರಕಾರ, ನಮ್ಮ ಎಂಪಿ ಬೇಕು. ಜಿಲ್ಲೆ ಪರಿಪೂರ್ಣ ನೀರಾವರಿಯಾಗುತ್ತದೆ ಎಂದರು.
ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ನೀವು ನಮ್ಮನ್ನು ಪ್ರಶ್ನೆ ಮಾಡಿದಂತೆ ಜಿಗಜಿಣಗಿಯವರಿಗೆ ಕೇಳುವುದು ಆಗಲ್ಲ. ಅವರು ಸಿಗುವುದೇ ಇಲ್ಲ. ಹಾಲು ನೀಡದ ಹಸುವನ್ನೇ ಇಟ್ಟುಕೊಳ್ಳಲ್ಲ, ಇನ್ನು ಕೆಲಸ ಮಾಡದ ಸಂಸದ ಜಿಗಜಿಣಗಿ ಯಾಕೆ ಬೇಕು. ಐವತ್ತು ವರ್ಷ ಅಧಿಕಾರ ಅನುಭವಿಸಿದ ಅವರಿಂದ ನಯಾಪೈಸೆ ಕೆಲಸ ಮಾಡಿಲ್ಲ ಎಂದು ಕೇಳಿದರು.
ರಾಜು ಆಲಗೂರ ಇಲ್ಲಿನ ವಿಧಾನಸಭೆ ಕ್ಷೇತ್ರ ಬಿಟ್ಟು ಸಂಸತ್ಗೆ ನಿಂತಿದ್ದಾರೆ. ಅವರೊಬ್ಬ ಪ್ರೊಫೆಸರ್ ಆಗಿದ್ದು ಸಂಸತ್ನಲ್ಲಿ ಚೆನ್ನಾಗಿ ಮಾತನಾಡಲಿದ್ದಾರೆ. ನಿಮಗೆ ದನಿಯಾಗಲಿದ್ದಾರೆ. ಯುಕೆಪಿ ಕೆಲಸ ಕೈಗೂಡಲಿದೆ. ಬೇರೆಯವರ ಕೆಲಸ ತಾನು ಮಾಡೀನಿ ಎನ್ನುವ ಜಿಗಜಿಣಗಿಯವರು ಬೇಕೋ ಕಾಂಗ್ರೆಸ್ ಬೇಕೊ ನೀವೇ ನಿರ್ಧರಿಸಿ. ಆರು ಜನ ಹೆಣ್ಣುಮಕ್ಕಳಿಗೆ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಎಂಭತ್ತು ಜನರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಮಹಿಳೆಯರ ನಮ್ಮ ನಿಲುವು ತೋರಿದ್ದೇವೆ. ಅದೇ ಬಿಜೆಪಿ ಕೇವಲ ಒಬ್ಬರಿಗೆ ಲೋಕಸಭೆ ಟಿಕೆಟ್ ನೀಡಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಾಲ ಮನ್ಬಾ, ಹೆಣ್ಣುಮಕ್ಕಳಿಗೆ ತಿಂಗಳಿಗೆ ಹತ್ತು ಸಾವಿರ ರೂ. ಬರುತ್ತದೆ ಎಂದು ಹೇಳಿದರು.
ದೇಶದಲ್ಲೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯವಾದ ನಮಗೆ ಬರ ಪರಿಹಾರ, ಜಿಎಸ್ಟಿ ಪಾಲು ಸಿಗಲಿಲ್ಲ. ಈ ದುರ್ಭಾಗ್ಯಕ್ಕೆ ನಮಗೆ ಮೋದಿಯವರು ಬೇಕಾ ಎಂದು ಕೇಳಿದರು.
ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ನನಗೆ ನೀಡಿದ್ದಕ್ಕಿಂತ ಹೆಚ್ಚು ಮತವನ್ನು ಆಲಗೂರರಿಗೆ ನೀಡಿ ಎಂದು ಮನವಿ ಮಾಡಿದರು.
ಯಶವಂತರಾಯಗೌಡ ಪಾಟೀಲ ಮಾತನಾಡಿ, ನಾಗಠಾಣ ಗಂಡುಮೆಟ್ಟಿದ ನೆಲವಾಗಿದೆ. ಇಲ್ಲಿನವರೇ ಆದ ಆಲಗೂರರಿಗೆ ಸಂಸತ್ನಲ್ಲಿ ಧ್ವನಿಯಾಗುವ ಶಕ್ತಿ, ಸಾಮರ್ಥ್ಯವಿದೆ. ಮೋದಿಯವರ ವೈಫಲ್ಯ ದೇಶಕ್ಕೀಗ ಗೊತ್ತಾಗುತ್ತಿದೆ. ಕಾಂಗ್ರೆಸ್ಗೆ ಮರು ಶಕ್ತಿ ನೀಡಿ. ಜಿಲ್ಲೆಯಲ್ಲಿ ಲಕ್ಷ ಮತಗಳಿಂದ ಗೆಲ್ಲುವ ಒಳ್ಳೆಯ ವಾತಾವರಣವಿದೆ. ಆ ದಾಖಲೆಯನ್ನು ನೀವು ಮಾಡಿ. ಜಿಲ್ಲೆಯ ಪ್ರವಾಸೋದ್ಯಮ ಪ್ರಗತಿಯಾಗಬೇಕು, ಬರಗಾಲಕ್ಕೆ ನೆರವು ಬೇಕಿದೆ. ರಾಜ್ಯಗಳ ಹಿತವನ್ನು ಮೋದಿ ಕಾಯ್ದುಕೊಳ್ಳುತ್ತಿಲ್ಲ. ಅವರಿಗೆ ಆತ್ಮಸಾಕ್ಷಿ, ಮತ ಕೇಳುವ ನೈತಿಕತೆಯೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಮಾತನಾಡಿ, ಬಿಜೆಪಿ ಸಂಸದ ಜಿಗಜಿಣಗಿಯವರು ಅಭಿವೃದ್ಧಿ ಕೆಲಸ ಮಾಡುವುದು ಬಿಡಿ, ಒಂದು ದೇವರಿಗೆ ಪಟ್ಟಿ ಕೂಡ ಕೊಟ್ಟಿಲ್ಲ. ಸಮೀಪದ ಮಕಣಾಪುರವನ್ನು ಅವರು ದತ್ತು ತೆಗೆದುಕೊಂಡಿದ್ದರು. ಅಲ್ಲಿಯ ದೇವಸ್ಥಾನಕ್ಕೆ ದ್ವಾರ ಬಾಗಿಲು ಮಾಡಲಾಗಿಲ್ಲ. ನನಗೆ ಬೇಡ ಮೋದಿಯವರ ಮಾರಿ ನೋಡಿ ಮತ ಹಾಕಿ ಅಂತ ಈಗ ಬರುತ್ತಿದ್ದಾರೆ ಎಂದು ಹೇಳಿದರು.
ವಿಜಯಪುರದಿಂದ ಸರಿಯಾದ ರೈಲು ವ್ಯವಸ್ಥೆ ಇಲ್ಲ. ತೋಟಗಾರಿಕೆ ಇದ್ದರೂ ಅದಕಕ್ಕೆ ಬೆಲೆ ಸಿಗಲಿಲ್ಲ. ಇದೆಲ್ಲ ಸರಿಯಾಗಬೇಕಾದರೆ ವಿದ್ಯಾವಂತರಾದ ರಾಜು ಆಲಗೂರರನ್ನು ಬೆಂಬಲಿಸಿ. ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ಗೆ ಮತ ಹಾಕಿ ನಾಗಠಾಣದಲ್ಲಿ ಬಹುಮತ ನೀಡಿ ಎಂದರು.
ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಮಾತನಾಡಿ, ರೈತರು ಬರಗಾಲದಿಂದ ತತ್ತರಿಸಿದರೂ ಕೇಂದ್ರ ಸರ್ಕಾರ ನೆರವಿಗೆ ಬರಲಿಲ್ಲ. ಸುಪ್ರೀಂ ಕೋರ್ಟ್ ಮೊರೆ ಹೋದಾಗ ಅದು ತಾಕೀತು ಮಾಡಿದಾಗ ಪರಿಹಾರ ನೀಡುವ ಪ್ರಸಂಗ ಬಂದಿದೆ. ಆದರೆ ಇನ್ನೊಂದು ಕಡೆ ಕಾಂಗ್ರೆಸ್ ರಾಜ್ಯದಲ್ಲಿ ಜನಾನುರಾಗಿಯಾಗಿ ಕೆಲಸ ಮಾಡಿದೆ. ಕಳೆದ ಹತ್ತು ವರ್ಷಗಳಲ್ಲಿ ಬರೀ ವೈಫಲ್ಯ ಕಂಡಿದೆ. ಕಾಂಗ್ರೆಸ್ಗೆ ಈ ಸಲ ಅಧಿಕಾರ ನೀಡಿದರೆ ಸಾಲ ಮನ್ನಾ ಮಾಡಲಾಗುತ್ತದೆ. ದೇಶದಲ್ಲೂ ಗ್ಯಾರಂಟಿ ಪರ್ವ ಆರಂಭವಾಗಲಿದೆ. ತಮಗೆ ಮತ ನೀಡಿದರೆ ನಿಮ್ಮ ವಿಶ್ಬಾಸ ಉಳಿಸಿಕೊಳ್ಳುವೆ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷ ಒಗ್ಗಟ್ಟಿನಿಂದ ಹೋರಾಟ ಮಾಡುತ್ತಿದೆ. ಈ ಲೋಕಸಭೆ ಚುನಾವಣೆ ಹಲವು ತಿರುವು ನೀಡಲಿದೆ. ದೇಶದಲ್ಲಿ ಬದಲಾವಣೆ ಗಾಳಿ ಬೀಸಿದೆ. ಬಿಜೆಪಿ ಸುಳ್ಳು ಹೇಳಿ ಅಧಿಕಾರ ಹಿಡಿದಿದೆ ಎಂದರು.
ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಲಂಬಾಣಿಗರಿಗೆ ರಮೇಶ ಜಿಗಜಿಣಗಿ ಅವಮಾನ ಮಾಡಿದೆ. ನಾವು ಬಿಜೆಪಿಗೆ ಮತ ಹಾಕಬಾರದು. ಜಿಗಜಿಣಗಿ ಹಾಠವೋ ತಾಂಡಾ ಬಚಾವೋ ಆಂದೋಲನ ಮಾಡುತ್ತಿದ್ದೇವೆ ಎಂದರು.
ಇದೇ ಸಂದರ್ಭ ಮಾಜಿ ಜಿಪಂ ಸದಸ್ಯ ದಾನಪ್ಪ ಕಟ್ಟಿಮನಿ ಸೇರಿದಂತೆ ಅನೇಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು.
ವೀಕ್ಷಕರಾದ ಡಾ.ಸಯೀದ್ ಬುರಾನ, ಮುಖಂಡರಾದ ಡಿ.ಎಲ್.ಚವ್ಹಾಣ, ಎಂ.ಆರ್.ಪಾಟೀಲ, ಶ್ರೀದೇವಿ ಉತ್ಸಾಲರ, ಸುಜಾತಾ ಕಳ್ಳಿಮನಿ, ಬಾಬು ರಾಜೇಂದ್ರ ನಾಯಕ, ಆರ್ಡಿ.ಹಕ್ಕೆ, ಶಹನವಾಜ ಮುಲ್ಲಾ, ಸೋಮನಾಥ ಕಳ್ಳಿಮನಿ, ಸುರೇಶ ಗೊಣಸಗಿ, ಹೊನಮಲ್ಲ ಸಾರವಾಡ, ರಾಮನಮಗೌಡ ಪಾಟೀಲ, ತುಕಾರಾಮ ಘೋರ್ಪಡೆ, ಶಫೀಕ ಮನಗೂಳಿ, ಶ್ರೀಮಂತ ಇಂಡಿ, ರಘುನಾಥ ಜಾಧವ ಅನೇಕರಿದ್ದರು.