ವಿಜಯಪುರ : ಮನೆಯ ಮಾಳಿಗೆ ಮೇಲೆ ಶಿಕ್ಷಕನ ಕುಟುಂಬ ರಾತ್ರಿ ಮಲಗಿದ್ದ ಸಮಯ ಸಾಧಿಸಿದ ಕಳ್ಳರು, ಮನೆ ಬಾಗಿಲ ಬೀಗ ಮುರಿದು, ನಗದು ಸೇರಿ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಗುರುವಾರ ತಡರಾತ್ರಿ ಪಟ್ಟಣದ ವಿದ್ಯಾನಗರದಲ್ಲಿ ನಡೆದಿದೆ.
ಇಲ್ಲಿನ ಎಂಜಿಎಂಕೆ ಶಾಲೆಯ ಶಿಕ್ಷಕ ಜಗದೀಶ ಗಂಗಣ್ಣ ಮೇಟಿ ಅವರ ಮನೆಗೆ ರಾತ್ರಿ ನುಗ್ಗಿದ ಕಳ್ಳರು, ಮನೆಯೊಳಗಿನ ಮೂರು ಟ್ರೇಜರಿ ಮುರಿದು 25,000 ರೂ. ನಗದು, ತಾಳಿಚೈನು, ಉಂಗುರ, ಕಿವಿಯೋಲೆ, ಬೆಂಡೋಲೆ ಸೇರಿ ಅಂದಾಜು 4 ಲಕ್ಷ ಮೌಲ್ಯದ 80 ಗ್ರಾಂ ಚಿನ್ನ ಹಾಗೂ ಬೆಳ್ಳಿಯ ಆಭರಣ ಕಳುವು ಮಾಡಿದ್ದಾರೆ. ತಡರಾತ್ರಿ ಈ ಘಟನೆ ನಡೆದಿದ್ದು, ಅಕ್ಕಪಕ್ಕದ ಯಾರ ಗಮನಕ್ಕೂ ಬಂದಿಲ್ಲ. ಬೆಳಗ್ಗೆ ಮನೆ ಮಾಲೀಕರು ಬಂದು ನೋಡಿದಾಗಲೇ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಎಎಸ್’ಐ ಎ.ಬಿ.ಟಕ್ಕಳಕಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.