ವಿಜಯಪುರ: ಕೋವಿಡ್ 4ನೇ ಅಲೆ ಭೀತಿ ಕುರಿತು ಜನರು ಭಯ ಬೀಳುವ ಅಗತ್ಯವಿಲ್ಲ. ಆದರೆ ಕೋವಿಡ್ ನಿಯಂತ್ರಣಕ್ಕಾಗಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್ ಅಲೆ ಕುರಿತು ಭೀತಿಗೊಳ್ಳಬಾರದು ಎಂದರು.
ಗಡಿಗಳಲ್ಲಿ ಅಗತ್ಯ ಕ್ರಮಗಳ ಬಗ್ಗೆ ಪ್ರತಿಕ್ರಿಯಿಸಿ, ನಾಳೆ ಪ್ರಧಾನಿ ಅವರ ಸಭೆ ಇದ್ದು, ಈ ಸಭೆಯ ಬಳಿಕ ನಿರ್ಣಯ ಮಾಡಲಾಗುತ್ತದೆ. ಏರ್ ಪೋರ್ಟ್, ರಾಜ್ಯದ ಗಡಿಗಳಲ್ಲಿ ಮುಂಜಾಗ್ರತೆ ತೆಗೆದುಕೊಳ್ಳಲಾಗುವುದು. ಮಹಾರಾಷ್ಟ್ರ, ಕೇರಳ ಗಡಿಯಲ್ಲಿ ಮುಂಜಾಗ್ರತೆ ಬಗ್ಗೆ ಸಭೆ ಬಳಿಕ ತೀರ್ಮಾನಿಸಲಾಗುತ್ತದೆ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಷಯ ಹೈಕಮಾಂಡ್ ಗೆ ಬಿಟ್ಟಿದ್ದು, ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ 4 ಜನ ಬಿಜೆಪಿ ಶಾಸಕರಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಪ್ರಾಶಸ್ತ್ಯ ಕೊಡುವ ಕುರಿತು ಅನೇಕ ಮನವಿಗಳು ಬಂದಿವೆ. ಅದು ಹೈಕಮಾಂಡ್ಗೆ ಬಿಟ್ಟ ವಿಷಯ ಎಂದರು.