ಹಾವೇರಿ: ಸರಕಾರ ಬೇಗ ರಾಜೀನಾಮೆ ಕೊಡಬೇಕು. ತಾವು ಸಿಎಂ ಆಗಬೇಕು ಅನ್ನೋ ಹಂಬಲ ಎಂಬ ಹಂಬಲ, ಆಸೆಯಲ್ಲಿದ್ದಾರೆ ಸಿದ್ದರಾಮಯ್ಯ. ಇದಕ್ಕಿಂತಲೂ ಹೆಚ್ಚಿನ ಹಂಬಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿರುವರು.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದ ಬಳಿ ರೈತರ ಜಮೀನಿಗೆ ಭೇಟಿ ನೀಡಿ ಸಸಿಗಳನ್ನು ವಿತರಣೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲದಕ್ಕೂ ರಾಜೀನಾಮೆ ಕೊಡಬೇಕು ಅಂತಾ ಹೇಳಿದರೆ ಹೇಗೆ.? ಹಿಂದೆ ಕೆ.ಜೆ.ಜಾರ್ಜ್ ಪ್ರಕರಣ ಆದಾಗ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟಿದ್ರಾ.? ಸಚಿವ ಅಶ್ವತ್ಥನಾರಾಯಣ ಸಂಬಂಧಿಕರು ಯಾರೋ ಮಾಡಿದರು ಅಂತಾ ಅಶ್ವತ್ಥ ನಾರಾಯಣ ಹೊಣೆ ಮಾಡುವುದು ಸರಿಯಲ್ಲ ಎಂದರು.
ಮುಖ್ಯಮಂತ್ರಿ ಬದಲಾವಣೆ ಎಂಬುದಿಲ್ಲ. ಅಮೀತ್ ಷಾ ಅವರು ಬಂದಾಗ ಸಿಎಂ ಬದಲಾವಣೆ ಕೂಗಿಲ್ಲ ಅಂತಾ ಹೇಳಿ ಹೋಗಿದ್ದಾರೆ. ಸಿಎಂ ಬದಲಾವಣೆ ಇಲ್ಲ ಅಂತಾ ಈಗಾಗಲೆ ಅರುಣಸಿಂಗ್, ಬಿಜೆಪಿ ರಾಜ್ಯಧ್ಯಕ್ಷ ನಳೀನಕುಮಾರ ಕಟೀಲು ಮತ್ತು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಅದರ ಬಗ್ಗೆ ನಿಮಗ್ಯಾಕೆ ಅಷ್ಟು ಆಸಕ್ತಿ ಇದೆ.? ಬದಲಾವಣೆ ಇದ್ದರೆ ಕರೆದು ಹೇಳುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ದಿನವೂ ಸಿಎಂ ಬದಲಾವಣೆ, ಮಂತ್ರಿಮಂಡಲ ಬದಲಾವಣೆ ಅನ್ನುತ್ತಾ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಆಡಳಿತವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿವೆ. ಶಾಸಕ ಯತ್ನಾಳರೇನು ಪಕ್ಷದ ಹೈಕಮಾಂಡಾ?. ಯತ್ನಾಳ ಅವರು ಅಮೀತ್ ಷಾ ಲೆವೆಲ್ ಇದ್ದಾರಾ?, ಅವೀತ್ ಷಾ ಅವರು, ಅರುಣ ಸಿಂಗ್ ಅವರು ಹೇಳಿದರೆ ಅದಕ್ಕೊಂದು ಬೆಲೆ ಇದೆ. ಯತ್ನಾಳರಿಗೇನಾದ್ರೂ ಪಕ್ಷದ ನಾಯಕರು ಫೋನ್ ಮಾಡಿ ಹೇಳಿದ್ದಾರೋ ಗೊತ್ತಿಲ್ಲ. ನಾಲ್ಕೈದು ಸಚಿವ ಸ್ಥಾನಗಳು ಖಾಲಿ ಇವೆ. ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಯಾವಾಗ ವಿಸ್ತರಣೆ ಮಾಡುತ್ತಾರೋ ಅದು ಅವರ ಪರಮಾಧಿಕಾರ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.