ಬೆಂಗಳೂರು(ಜ.30) : ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಎಲ್ಲದಕ್ಕೂ ಒಂದು ಪ್ರತಿಕ್ರಿಯೆ ನೀಡಬೇಕು ಎಂಬ ಚಟ ಹಾಗೂ ಹೆಚ್ಚು ಬಜೆಟ್ ಮಂಡಿಸಿದ್ದೇನೆ ಎಂಬ ಅಹಂ ಇದೆ. ಹೀಗಾಗಿ ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡುವ ಅವರು ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಸಾಧನೆಗಳನ್ನು ವಿನಾಕಾರಣ ಟೀಕಿಸಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ತಮಗೆ ದೊರೆತ ಆರು ತಿಂಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಐದು ವರ್ಷ ಆಡಳಿತ ನಡೆಸಿದರೂ ಯಾವುದೇ ಜನಪರ ಕೆಲಸ ಮಾಡಿಲ್ಲ. ಹೀಗಾಗಿಯೇ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಕೇವಲ 78 ಸ್ಥಾನ ನೀಡಿದರು. ಅದರಲ್ಲೂ 17 ಮಂದಿ ಕಾಂಗ್ರೆಸ್ ಬಿಟ್ಟು ಹೊರ ಬಂದರು ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಶಾಸಕರು ಪಕ್ಷ ಬಿಟ್ಟ ಬಗ್ಗೆ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಯಿಂದ ತನಿಖೆ ಮಾಡಿಸಬೇಕಿತ್ತು. ಸಮಿತಿ ಮಾಡಿ ಏಕೆ ಕಾಂಗ್ರೆಸ್ ಬಿಟ್ಟರು ಎಂಬುದು ತಿಳಿಯಬೇಕಿತ್ತು. ಇದೀಗ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಕೂಡ ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಈಗಲಾದರೂ ಕಾಂಗ್ರೆಸ್ ಬುದ್ಧಿ ಕಲಿಯಲಿ ಎಂದರು.
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಶೋ ನಡೆಯುತ್ತಿದೆ. ಅವರ ನಡುವೆ ಅಧಿಕಾರಕ್ಕಾಗಿ ಸ್ಪರ್ಧೆ ಏರ್ಪಟ್ಟಿದೆ. ಹೊಟೇಲ್ಗಳ ಮುಂದೆ ಇಂದಿನ ವಿಶೇಷ ಎಂದು ಬೋರ್ಡ್ ಇರುವ ಹಾಗೆಯೇ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ನಡುವೆ ನಿತ್ಯ ಇಂದಿನ ವಿಶೇಷ ಎಂದು ವಿಶೇಷ ಶೋ ನಡೆಯುತ್ತದೆ ಎಂದು ವ್ಯಂಗ್ಯವಾಡಿದರು.